ಬೆಳಗಾವಿ: ಭವಾನಿ ರೇವಣ್ಣ (Bhavani Revanna) ಆಡಿದ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ರಾಜ್ಯದ ಜನರಿಗೆ ಪತ್ನಿಯ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ ಎಂದು ಹೆಚ್ಡಿ ರೇವಣ್ಣ (HD Revanna) ಹೇಳಿದ್ದಾರೆ.
ಬೆಳಗಾವಿಯ (Belagavi) ಸುವರ್ಣ ಸೌಧದಲ್ಲಿ ಮಾತನಾಡಿದ ಹೆಚ್ಡಿ ರೇವಣ್ಣ, ಬೈಕ್ ಚಾಲಕನಿಗೆ ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು? ಭವಾನಿಯವರು ಏನೂ ಅಹಂಕಾರದ ಮಾತಾಡಿಲ್ಲ. ಭವಾನಿಯವರು ಯಾರದ್ದೋ ಸ್ನೇಹಿತರ ಕಾರಿನಲ್ಲಿ ಹೋಗಿದ್ದರು. ಅವರು ಅಪಘಾತ ಸಂಭವಿಸಿದಾಗ ಸಿಟ್ಟಿನಲ್ಲಿ ಮಾತನಾಡಿದ್ದಾರೆ. ನಮ್ಮ ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಿಲ್ಲ ಎಂದು ಹೇಳಿದರು.
ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಅದರ ವೀಡಿಯೋವನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ನವನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? ಅದರಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಬೇಕಿದ್ದರೆ ಭವಾನಿ ಹತ್ತಿರನೂ ಕ್ಷಮೆ ಕೇಳಿಸೋಣ ಬಿಡಿ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ತಾಯಿ ಅಕ್ಷಮ್ಯ ಪದ ಬಳಕೆಗೆ ಕ್ಷಮೆಯಾಚಿಸಿದ ಸೂರಜ್ ರೇವಣ್ಣ
ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಸ್ನೇಹಿತರ ಕಾರು ಅಂತ ಅವರು ಹಾಗೆ ಮಾಡಿದ್ದಾರೆ. ನಮ್ಮ ಕುಟುಂಬ ಆ ಥರ ಇಲ್ಲ. ಗಾಡಿ ಅವಘಡ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ? ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಯಾರಿಗಾದರೂ ನೋವಾಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ಆತ ಕುಡಿದು ಬಂದು ಗಾಡಿಗೆ ಗುದ್ದಿದ್ದಾನೆ. ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಷಯ ಮಾಡಬೇಡಿ ಎಂದು ಕೇಳಿಕೊಂಡರು.
ಕಾರನ್ನು ಎಷ್ಟೇ ಸೈಡಿಗೆ ತೆಗೆದುಕೊಂಡು ಹೋದರೂ ಬೈಕಿನವ ಕಾರಿಗೆ ಅಡ್ಡ ಬಂದು ಅಪಘಾತ ಮಾಡಿದ್ದಾನೆ. ದೂರು ಕೊಟ್ಟಿದ್ದಾರೆ, ಕಾರು ಅಪಘಾತ ಆಗಿರುವ ಕಾರಣ ಇನ್ಶ್ಯೂರೆನ್ಸ್ಗಾಗಿ ದೂರು ನೀಡಿದ್ದಾರೆ. ಯಾರನ್ನೂ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಿಲ್ಲ. ಬೈಕ್ ಸವಾರ ಕುಡಿದಿದ್ದ ಕಾರಣ ಅಪಘಾತ ಸಂಭವಿಸಿದೆ. ಆತನ ವಿರುದ್ಧ ದೂರು, ಕ್ರಮ ಕೈಗೊಳ್ಳಲ್ಲ. ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕುಟುಂಬದಿಂದ ಯಾರಿಗೂ ನೋವನ್ನುಂಟು ಮಾಡುವುದಿಲ್ಲ. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೆಚ್ಡಿ ರೇವಣ್ಣ ನುಡಿಸಿದ್ದಾರೆ. ಇದನ್ನೂ ಓದಿ: ಎಕ್ಸೆಲ್ ಕಟ್ ಆಗಿ ನಿಯಂತ್ರಣ ತಪ್ಪಿದ್ದ ಬಸ್ – ದೊಡ್ಡ ದುರಂತ ತಪ್ಪಿಸಿದ ಚಾಲಕನಿಗೆ ಸನ್ಮಾನ