ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ನಟ ವಿಜಯ್ ಸೂರ್ಯ ಹೊರ ಬಂದಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ.
ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ. ವಿಜಯ್ ಈಗ ಬ್ರೇಕ್ ಬೇಕಾಗಿರುವ ಕಾರಣ ಅವರು ಧಾರಾವಾಹಿಯಿಂದ ಹೊರ ನಡೆಯಲು ಇದೇ ಸಮಯ ಉತ್ತಮ ಎಂದು ಹೊರ ನಡೆದಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರು ತಮ್ಮ ಕುಟುಂಬದ ಜೊತೆ ಸ್ವಲ್ಪ ಕಾಲ ಕಳೆಯಬೇಕು ಎಂದು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಜಯ್ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈಗ ಅವರು ಲಕ್ನೋ ಟು ಮುಂಬೈ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಈ ಧಾರಾವಾಹಿಯಿಂದ ಸನ್ನಿಧಿ ಪಾತ್ರಧಾರಿಯ ವೈಷ್ಣವಿ ಕೂಡ ಹೊರಬರುತ್ತಾರಾ ಎಂದು ಪ್ರೇಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತ್ತೆ ಕೆಲವರು ನಟ ಹೊರಬಂದ ಮೇಲೆ ಧಾರಾವಾಹಿ ಮುಕ್ತಾರವಾಗಬಹುದು ಎಂದು ಹೇಳುತ್ತಿದ್ದಾರೆ. ಸದ್ಯ ಸನ್ನಿಧಿ ಪಾತ್ರ ಮುಂದುವರಿಯಲಿದ್ದು, ಪೇಕ್ಷಕರು ಧಾರಾವಾಹಿ ಮುಕ್ತಾಯ ಆಗುತ್ತಾ ಎಂಬ ಗೊಂದಲದಲ್ಲಿ ಇದ್ದಾರೆ.