ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕದ ಜೊತೆ ಮಾತುಕತೆಗೆ ಸಿದ್ಧವಿಲ್ಲವೆಂದು ತಮಿಳುನಾಡು ಸರ್ಕಾರ ಪತ್ರ ಬರೆಯುವ ಮೂಲಕ ಮತ್ತೆ ಕ್ಯಾತೆ ಎತ್ತಿದೆ.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ ತಮಿಳುನಾಡು ಸರ್ಕಾರ ಮರು ಪತ್ರ ಕಳುಹಿಸಿದೆ. ಪತ್ರದಲ್ಲಿ ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ಇರುವುದರಿಂದ ಕರ್ನಾಟಕದ ಜೊತೆ ಯಾವುದೇ ಮಾತುಕತೆ ನಡೆಸಲು ತಮಿಳುನಾಡು ಸಿದ್ಧವಿಲ್ಲವೆಂದು ತಿಳಿಸಿದೆ.
ಡಿಕೆಶಿ ಬರೆದ ಪತ್ರಕ್ಕೂ ಡೋಂಟ್ ಕೇರ್ ಎಂದಿರುವ ತಮಿಳುನಾಡು, ತಾನು ನ್ಯಾಯಾಲಯದಲ್ಲೇ ಮೇಕೆದಾಟು ಯೋಜನೆಯನ್ನು ನೋಡಿಕೊಳ್ಳುತ್ತೇನೆಂದು ಪರೋಕ್ಷವಾಗಿ ಕರ್ನಾಟಕದೊಂದಿಗೆ ಮತ್ತೆ ಕ್ಯಾತೆ ಎತ್ತಿದೆ. ಇದನ್ನೂ ಓದಿ: ಮೇಕೆದಾಟು ವಿಚಾರ ಸಮಸ್ಯೆ ಬಗೆಹರಿಸಲು ತಮಿಳುನಾಡಿಗೆ ಪತ್ರ ಬರೆದ ಡಿಕೆಶಿ
ರಾಜ್ಯದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಯೋಜನೆಗೆ ತಡೆ ಕೋರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೇ ಕಾನೂನು ಹೋರಾಟಕ್ಕೂ ಸಹ ತಜ್ಞರನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ವಾಸ್ತವಾಂಶ ತಿಳಿಸಲು ಡಿ.ಕೆ.ಶಿವಕುಮಾರ್ ಪತ್ರ ಬರೆದು, ಭೇಟಿಗೆ ಅವಕಾಶ ನೀಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv