ಚೆನ್ನೈ: ಬಾಲಕನೊಬ್ಬನ ಮೇಲೆ ಮೂವರು ವಿದ್ಯಾರ್ಥಿಗಳು ಜಾತಿ ನಿಂದನೆಗೈದು ಬೆಂಕಿಗೆ ತಳ್ಳಿ ಗಾಯಗೊಳಿಸಿದ ಘಟನೆ ವಿಲುಪುರಂ ಜಿಲ್ಲೆಯ ತಿಂಡಿವನಂ ಪಟ್ಟಣದ ಕಟ್ಟುಚಿವಿರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸೋಮವಾರ ಸಂಜೆ 4.30ರ ಸುಮಾರಿಗೆ ಬಾಲಕ ತನ್ನ ಅಜ್ಜಿಯನ್ನು ಭೇಟಿ ಮಾಡಲು ಮನೆಯಿಂದ ಹೊರಟಿದ್ದನು. ಈ ವೇಳೆ ದಾಳಿಕೋರರು ಅವನಿಗೆ ಜಾತಿ ನಿಂದನೆಗೈದು ಮನ ಬಂದತೆ ಥಳಿಸಿ ಬೆಂಕಿಗೆ ತಳ್ಳಿದ್ದಾರೆ. ಹೀಗಾಗಿ ಬಾಲಕನ ಬೆನ್ನು, ಎದೆ, ಭುಜದ ಮೇಲೆ ಸುಟ್ಟ ಗಾಯಗಳಾಗಿದ್ದು, ಮನೆಗೆ ಹಿಂದಿರುಗಿದಾಗ ಆತನ ಪೋಷಕರು ಆಘಾತಕ್ಕೊಳಗಾಗಿದ್ದರು. ಏನಾಯಿತು ಎಂದು ಕೇಳಿದಾಗ, ಬೆಂಕಿ ಹೊತ್ತಿಕೊಂಡಿದ್ದ ಪೊದೆಗೆ ಜಾರಿ ಬಿದ್ದೆ ಎಂದು ಬಾಲಕ ಪೋಷಕರ ಮುಂದೆ ಸುಳ್ಳು ಹೇಳಿದ್ದಾನೆ. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!
ಬಾಲಕನು ಈ ಹಿಂದೆ ತನ್ನ ಶಾಲೆಯಲ್ಲಿ ಒಂದೆರಡು ಮೇಲ್ಜಾತಿಯ ವಿದ್ಯಾರ್ಥಿಗಳು ತನ್ನನ್ನು ಬೆದರಿಸುತ್ತಿದ್ದಾರೆ. ಜಾತಿ ನಿಂದನೆಗೈಯುತ್ತಿದ್ದಾರೆ ಎಂದು ಆರೋಪಿಸಿದ್ದನು. ಆ ದಿನ ಅವನು ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಹುಡುಗರು ಅವನನ್ನು ಪೊದೆಯ ಬೆಂಕಿಗೆ ತಳ್ಳಿದ್ದಾರೆ. ಈ ವೇಳೆ ಬಾಲಕನು ಹತ್ತಿರದ ಟ್ಯಾಂಕ್ಗೆ ಹಾರಿ ಬದುಕುಳಿದಿದ್ದಾನೆ. ಇದನ್ನೂ ಓದಿ: ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ್ದ ಆಟೋ ಚಾಲಕನ ಮೇಲೆ ರೇಪ್ ಆರೋಪ
ಬಾಲಕನನ್ನು ಚಿಕಿತ್ಸೆಗಾಗಿ ತಿಂಡಿವನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತನ ಹೇಳಿಕೆಯನ್ನು ತೆಗೆದುಕೊಂಡ ನಂತರ ತಮಿಳುನಾಡಿನ ಪೊಲೀಸರು ಬಾಲಾಪರಾಧಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.