ಚೆನ್ನೈ: ಭಾರೀ ಮಳೆಯಿಂದ ತತ್ತರಿಸಿ ಹೋಗಿರುವ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತೊಮ್ಮೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಫೋಷಣೆ ಮಾಡಿದೆ.
ಬುಧವಾರ ಮತ್ತು ಗುರುವಾರದಂದು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕಡಿಮೆ ಒತ್ತಡ ಕರಾವಳಿಯನ್ನು ತಲುಪುತ್ತಿದ್ದು, ಗುರುವಾರ ರಾತ್ರಿಯವರೆಗೂ ಚೆನ್ನೈ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್
ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಮಳೆಯಾಗಬಹುದು. ಬುಧವಾರ ಮತ್ತು ಗುರುವಾರ 20 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಎರಡು ದಿನಗಳ ಕಾಲ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಲೋಮೀಟರ್ಗೆ ತಲುಪಬಹುದು ಎಂದು ಇಲಾಖೆ ವರದಿ ಮಾಡಿದೆ.
ಭಾರೀ ಮಳೆಯಿಂದ ಜಲಾವೃತಗೊಂಡಿದ್ದ ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಪ್ರವಾಹದ ನಂತರ, ಹಲವಾರು ಜನರು ಪರಿಹಾರ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆ ಜನರನ್ನು ಮನೆಗಳಿಗೆ ಸ್ಥಳಾಂತರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸುಮಾರು 848 ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ
ಮಂಗಳವಾರ ಕೂಡ ಚೆನ್ನೈನ ಒಂಬತ್ತು ಸ್ಥಳಗಳಲ್ಲಿ 16 ಬೀದಿಗಳು ನೀರಿನಿಂದ ಜಲಾವೃತವಾಗಿದ್ದು, ನೀರನ್ನು ಪಂಪ್ ಮಾಡಿ ಹೊರತೆಗೆಯಲಾಗುತ್ತಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ನ ಹಿರಿಯ ಅಧಿಕಾರಿಗಳು, ನೀರನ್ನು ಹೊರ ತೆಗೆಯಲು 426 ಪಂಪ್ಗಳನ್ನು ಬಳಸಲಾಗಿದೆ. ರಂಗರಾಜಪುರಂ ಸುರಂಗಮಾರ್ಗವು ಜಲಾವೃತಗೊಂಡು ಮುಚ್ಚಲ್ಪಟ್ಟಿತು. ಅದಕ್ಕೆ ನೀರನ್ನು ಹೊರ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿಸಿದರು.