ಹೈದರಾಬಾದ್: ಪಂಚರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ಹೊರಬಿದ್ದಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. 119 ಸ್ಥಾನಗಳ ಪೈಕಿ 69 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಕಾಯ್ದುಕೊಂಡಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಆಡಳಿತಾರೂಢ BRS ಹಿಂದಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್ ಮುನ್ನಡೆಸಿದ ಶ್ರೇಯ ರೇವಂತ್ ರೆಡ್ಡಿ (Revanth Reddy) ಅವರಿಗೆ ಸಲ್ಲುತ್ತದೆ ಎಂಬುದನ್ನು ‘ಕೈ’ ನಾಯಕರು ಪ್ರತಿಪಾದಿಸಿದ್ದಾರೆ.
Sweetest victory for Congress @INCIndia ????????@revanth_anumula pic.twitter.com/1mAtE2AYSD
— Ramya/Divya Spandana (@divyaspandana) December 3, 2023
ಈ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಂಸದೆ ಹಾಗೂ ಸ್ಯಾಂಡಲ್ವುಡ್ ನಟಿ ರಮ್ಯಾ (Actor Ramya), ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾ X ಖಾತೆಯಲ್ಲಿ ರೇವಂತ್ ರೆಡ್ಡಿ ಫೋಟೋ ಹಂಚಿಕೊಂಡಿದ್ದು, ಕಾಂಗ್ರೆಸ್ಗೆ ಸ್ವೀಟೆಸ್ಟ್ ವಿಕ್ಷರಿ (ಅತ್ಯಂತ ಸಿಹಿಯಾದ ಜಯ) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ರೇವಂತಿ ರೆಡ್ಡಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್ ರೆಡ್ಡಿ ಈಗ ಕಾಂಗ್ರೆಸ್ ಸಿಎಂ ರೇಸ್ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?
ಸದ್ಯ ಪಕ್ಷದ ಗೆಲುವಿಗೆ ಕಾರಣರಾಗಿರುವ ರೇವಂತ್ ರೆಡ್ಡಿ ಅವರು ಸಿಎಂ ರೇಸ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ರೇವಂತ್ ರೆಡ್ಡಿ ಹೈದರಾಬಾದ್ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ‘ಸಿಎಂ.. ಸಿಎಂ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ
ಯಾರು ಈ ರೇವಂತ್ ರೆಡ್ಡಿ?
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ, (56) ಅವರು ಪಕ್ಷದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಇದಕ್ಕೂ ಮೊದಲು ರೇವಂತ್ ರೆಡ್ಡಿ ಆರ್ಎಸ್ಎಸ್ ಮತ್ತು ಎಬಿವಿಪಿ ಯಿಂದ ಗುರುತಿಸಿಕೊಂಡಿದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಅವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪರ ಅವರು ಕ್ಯಾಂಪೇನ್ ನಡೆಸುತ್ತಿದ್ದಾಗ, ಅವರ ಹಿನ್ನೆಲೆ ಹೆಚ್ಚು ಚರ್ಚೆಯಾಗುತ್ತಿದೆ. ರೇವಂತ್ ರೆಡ್ಡಿ ಆರ್ಎಸ್ಎಸ್ ಕೈಗೊಂಬೆ ಎಂದು ಅನೇಕರು ಟೀಕಿಸಿದ್ದೂ ಉಂಟು.
ರೇವಂತ್ ರೆಡ್ಡಿ ಅವರು ಎಬಿವಿಪಿಯಿಂದ ರಾಜಕೀಯ ಜೀವನ ಆರಂಬಿಸಿದರು. ನಂತರ ಟಿಡಿಪಿಗೆ ಹೋದರು. 2009 ಮತ್ತು 2014 ರ ಚುನಾವಣೆಯಲ್ಲಿ ಕೊಡಂಗಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಲಂಚ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರು ಟಿಡಿಪಿ ತೊರೆದರು. 2017 ರ ಅಕ್ಟೋಬರ್ನಲ್ಲಿ ಕಾಂಗ್ರೆಸ್ ಸೇರಿದರು. 2018 ರ ಚುನಾವಣೆಯಲ್ಲಿ ಬಿಆರ್ಎಸ್ ವಿರುದ್ಧ ಸ್ಪರ್ಧಿಸಿ ಕೊಡಂಗಲ್ನಿಂದ ಸೋತರು. ಆದರೆ ಮತ್ತೆ ಪುಟಿದೆದ್ದು 2019 ರ ಲೋಕಸಭೆ ಚುನಾವಣೆಯಲ್ಲಿ ಮಲ್ಕಾಜ್ಗಿರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಜೂನ್ 2021 ರಲ್ಲಿ ಅವರನ್ನು TPCC ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.