ಉಡುಪಿ: ಕೊರಗರ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ ಎಂದು ಜಿಲ್ಲೆ ಬ್ರಹ್ಮಾವರ ತಾಲೂಕು ಕೋಟತಟ್ಟು ಕೊರಗ ಕಾಲೊನಿಗೆ ಆಗಮಿಸಿದ ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಆರು ದಿನಗಳ ಹಿಂದೆ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಮದುವೆ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಬಂದ ಕೋಟ ಪೊಲೀಸ್ ಠಾಣೆ ಸಿಬ್ಬಂದಿ ಲಾಠಿಚಾರ್ಜ್ ಮಾಡಿದ್ದರು. ಈ ವೇಳೆ ಆರು ಜನರನ್ನು ಥಳಿಸಿ, ಕೆಲವರನ್ನು ವಿವಸ್ತ್ರ ಮಾಡಿ ತಾಕೀತನ್ನು ಮಾಡಿದ್ದರು. ಈ ಪರಿಣಾಮ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬವನ್ನು ಇಂದು ಸುನಿಲ್ ಕುಮಾರ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ
ಈ ವೇಳೆ ಸುನಿಲ್ ಅವರು, ಮೆಹಂದಿ ದಿನ ನಡೆದ ಪೂರ್ತಿ ವಿವರಗಳನ್ನು ಪಡೆದುಕೊಂಡಿದ್ದು, ಅಂದು ರಾತ್ರಿ ನಡೆದ ಘಟನೆಯ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮನೆಯವರು ನ್ಯಾಯಕ್ಕಾಗಿ ವಿನಂತಿಸಿದರು. ಈ ಸಂಬಂಧ ಅವರು ಘಟನೆಯನ್ನು ಖಂಡಿಸಿದ್ದು, ಈ ಕುಟುಂಬದ ಮೇಲೆ ಸುಳ್ಳು ಮೊಕದ್ದಮೆ ಹೂಡಿರುವ ಆರೋಪ ನನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಡಿಸಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಸಮಾಜದ ಕಟ್ಟಕಡೆಯ ವರ್ಗಕ್ಕೆ ಆಗಿರುವ ತೊಂದರೆ ಮತ್ತೊಮ್ಮೆ ಮರುಕಳಿಸಬಾರದು ಎಂದು ಭರವಸೆಯನ್ನು ನೀಡಿದರು.
ಸರ್ಕಾರಿ ಅಧಿಕಾರಿಗಳು ಕರ್ತವ್ಯ ಮಾಡುವಾಗ ತಮ್ಮ ವ್ಯಾಪ್ತಿ ಮೀರಿ ವರ್ತಿಸಬಾರದು. ಸರ್ಕಾರಿ ಅಧಿಕಾರಿಗಳು ಜನರ ಹಿತ ಕಾಪಾಡಬೇಕಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅವರೇ ಈ ರೀತಿ ಮಾಡಿರುವುದು ವಿಷಾದನೀಯ. ಈ ಕುಟುಂಬಗಳಿಗೆ ಮತ್ತು ಈ ಸಮಾಜದ ಜನರಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ
ಈಗಾಗಲೇ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಅರಗ ಜ್ಞಾನೆಂದ್ರ, ಉಡುಪಿ ಡಿಸಿ, ಎಸ್ಪಿ ಘಟನಾ ಸ್ಥಳಕ್ಕೆ ತೆರಳಿ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಲಾಗಿದೆ.