ಉಡುಪಿ: ಪೇಜಾವರ ಶ್ರೀ ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. ಆಗ ಸದ್ಯಕ್ಕೆ 23ರ ನಂತರ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದ್ದಕ್ಕೆ, ನಸು ನಕ್ಕಿದ್ದರು ಎಂದು ಪುತ್ತಿಗೆ ಮಠದ ಸುಗಣೇಂದ್ರ ತೀರ್ಥ ಸ್ವಾಮೀಜಿ ಶ್ರೀಗಳ ಕುರಿತು ಹೇಳಿದ್ದಾರೆ.
ಉಡುಪಿ ಅಷ್ಟಮಠಗಳಲ್ಲಿ ಪುತ್ತಿಗೆ ಮಠ ಕೂಡ ಒಂದು. ಪುತ್ತಿಗೆ ಮಠದ ಸುಗಣೇಂದ್ರ ತೀರ್ಥ ಸ್ವಾಮೀಜಿಗಳು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಪೇಜಾವರ ಶ್ರೀಗಳ ಬಗ್ಗೆ ಹೇಳಿದರು. ಪೇಜಾವರ ಶ್ರೀ ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. ಆಗ ಸದ್ಯಕ್ಕೆ 23ರ ನಂತರ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದಕ್ಕೆ, ನಸು ನಕ್ಕಿದ್ದರು. ಹೀಗೆ ಆಗುತ್ತದೆ ಎಂದು ಶ್ರೀಗಳಿಗೆ ಮೊದಲೇ ಮುನ್ಸೂಚನೆ ಇತ್ತಾ ಎಂದು ತಿಳಿದಿಲ್ಲ. ಶ್ರೀಗಳು ಹೇಳಿದ್ದಕ್ಕೆ ನಾನು ವಿದೇಶಕ್ಕೆ ಹೋಗಿಲ್ಲ ಎಂದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ
ಮಂತ್ರಾಲಯದಲ್ಲಿ ಸಿಕ್ಕಾಗ ಶ್ರೀಗಳು 23ರ ನಂತರ ಎಲ್ಲಿಗೂ ಹೋಗೋದಿಲ್ಲ ಅಲ್ವಾ? ಸದ್ಯ ಎಲ್ಲೂ ವಿದೇಶಕ್ಕೆ ಹೋಗಲ್ಲ ಅಲ್ವಾ ಎಂದು ಎರಡೆರಡು ಬಾರಿ ಕೇಳಿದ್ದರು. ಅವರು ಎಂದಿಗೂ ಈ ರೀತಿ ನನ್ನ ಬಳಿ ಹೇಳಿರಲಿಲ್ಲ. ಆಗ ನನಗೆ ಅಚ್ಚರಿಯಾಗಿತ್ತು. ಆದರೆ ಈಗ ಹೀಗೆ ಆಗುತ್ತೆ ಎಂದು ಅವರಿಗೆ ಮೊದಲೇ ಸೂಚನೆ ಇತ್ತು ಎಂದು ನನಗೆ ಅನಿಸುತ್ತಿದೆ. ಬಹುಶಃ ಅವರ ಕೊನೆ ಕ್ಷಣಗಳಲ್ಲಿ ಅಷ್ಟಮಠದ ಸ್ವಾಮೀಜಿಗಳು ಇಲ್ಲಿಯೇ ಇರಬೇಕು ಎಂದು ಅವರ ಆಸೆ ಆಗಿತ್ತು ಅನಿಸುತ್ತೆ ಎಂದು ಬೆಳಗ್ಗೆ ಪೇಜಾವರ ಶ್ರೀಗಳನ್ನು ನೋಡಲು ಬಂದಾಗ ಅವರ ಮಾತನ್ನು ಪುತ್ತಿಗೆ ಶ್ರೀಗಳು ಹಂಚಿಕೊಂಡಿದ್ದರು.
ಆದರೆ ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ವಿಧಿವಶರಾಗಿದ್ದಾರೆ. ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾದರು.
ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಬೆಳಗ್ಗಿನ ಜಾವ 5 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಾಗಿರಲಿಲ್ಲ. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದರು.