– ಜೋಳಿಗೆಯಲ್ಲಿ ರೋಗಿಗಳ ಸಾಗಾಟ
ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಮಹಿಮೆ ಗ್ರಾಮದಲ್ಲಿ ಕಳೆದ 50 ದಶಕದಿಂದ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಅದು ಅಲ್ಲದೇ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಳ್ಳದ ಕಂಟಕ ಇರುವುದರಿಂದ ಶಾಲೆಯನ್ನೇ ಬಿಡುತ್ತಿದ್ದಾರೆ.
ಬಹುತೇಕ ಅರಣ್ಯವನ್ನು ಹೊಂದಿರುವ ಈ ಗ್ರಾಮ ಹೊನ್ನಾವರ ನಗರದಿಂದ 48 ಕಿಲೋಮೀಟರ್ ದೂರದಲ್ಲಿರುವ ಉಪ್ಪೋಣಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಗ್ರಾಮದಲ್ಲಿ 1,200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಈ ಕ್ಷೇತ್ರವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಸುರಕ್ಷಿತ, ಸುಂದರ, ಹಸಿರುಮಯ ಬೆಂಗಳೂರು ನಗರ ಮಾಡುವುದು ನಮ್ಮ ಗುರಿ: ಸಿಎಂ
ಮಹಿಮೆ ಗ್ರಾಮದ ಹಳ್ಳದಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿಗಳು ಶಾಲೆಗೆ ಹೋಗಲಾಗದೇ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸುತ್ತಿದ್ದಾರೆ. ಈ ಗ್ರಾಮದಲ್ಲಿ 42 ವಿದ್ಯಾರ್ಥಿಗಳು ಹೊನ್ನಾವರದ ವಿವಿಧ ಶಾಲೆ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರೆಲ್ಲರೂ ಪ್ರತಿ ದಿನ ಶಾಲೆ, ಕಾಲೇಜಿಗೆ ತೆರಳಲು ಮುಂಜಾನೆ 5 ಘಂಟೆಗೆ ಹೊರಡುತ್ತಾರೆ. ಮಹಿಮೆ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ಇಲ್ಲದ ಕಾರಣ ಪ್ರತಿ ವಿದ್ಯಾರ್ಥಿಗಳು 8 ಕಿಲೋಮೀಟರ್ ನೆಡೆದುಕೊಂಡು ಬರಬೇಕು. ದಾರಿಯ ಮಧ್ಯದಲ್ಲಿ ಹಳ್ಳ ಹರಿಯುವುದರಿಂದ ಈ ಹಳ್ಳ ದಾಟಬೇಕಾದರೇ ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಸಾಗಬೇಕು.
ಮಳೆಗಾಲದಲ್ಲಿ ನೆರೆ ಬರುವುದರಿಂದ ಹಳ್ಳ ದಾಟುವುದು ಕಷ್ಟ ಸಾಧ್ಯ. ಹೀಗಾಗಿ ಹೆಚ್ಚು ನೀರಿದ್ದ ದಿನ ಶಾಲೆ, ಕಾಲೇಜುಗಳಿಗೆ ತೆರಳಲಾಗುವುದಿಲ್ಲ. ಇನ್ನು ಅಲ್ಪ ನೀರು ಇಳಿದರೆ ಊರಿನ ಜನ ದಡದ ಎರಡೂ ಕಡೆ ಹಗ್ಗ ಹಾಕಿ ಮಕ್ಕಳನ್ನು ದಾಟಿಸುತ್ತಾರೆ. ಅಷ್ಟರಲ್ಲಿ ಶಾಲೆ, ಕಾಲೇಜಿನ ಸಮಯ ಪ್ರಾರಂಭವಾಗಿರುತ್ತದೆ. ಇನ್ನು ಶಾಲೆ, ಕಾಲೇಜು ಮುಗಿಸಿ ಮರಳಿ ಮನೆಗೆ ತೆರಳುವುದು ರಾತ್ರಿ 7 ಗಂಟೆ ದಾಟುತ್ತೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ
ಮಳೆಗಾಲದಿಂದ 6 ತಿಂಗಳು ಈ ಗ್ರಾಮಕ್ಕೆ ಹೊರ ಊರಿನ ಸಂಪರ್ಕ ಸಹ ಕಡಿತವಾಗುತ್ತದೆ. ಹೀಗಾಗಿ ಆರು ತಿಂಗಳು ಕಾಳು, ಕಡಿ ಸಂಗ್ರಹಿಸಿಕೊಳ್ಳಬೇಕು. ಈ ನಡುವೆ ರೋಗಿಗಳು, ಗರ್ಭಿಣಿಯರು ಇದ್ದರೆ ಅವರನ್ನು ನೆಂಟರ ಮನೆಯಲ್ಲಿ ಇರಿಸಿ ಕಾಪಾಡಬೇಕು. ಎಷ್ಟೋ ಬಾರಿ ಅಂಬುಲೆನ್ಸ್ ಸಹ ಈ ಭಾಗದಲ್ಲಿ ಬರಲಾಗದೇ ಜೋಳಿಗೆಯಲ್ಲಿ ರೋಗಿಗಳನ್ನು ಸಾಗಿಸಿದ ಉದಾಹರಣೆಗಳಿವೆ.
ಶಾಲೆ ಬಿಟ್ಟ ಆರು ವಿದ್ಯಾರ್ಥಿಗಳು!
ಪ್ರತಿ ದಿನ ಹಳ್ಳ ದಾಟಿ ಎಂಟು ಕಿಲೋಮೀಟರ್ ನಡೆಯುವುದು ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ. ಇನ್ನು ಈ ಭಾಗದಿಂದ ಬಾಲಕಿಯರೇ ಹೆಚ್ಚು ಶಾಲೆ, ಕಾಲೇಜಿಗೆ ತೆರಳುವುದರಿಂದ ಸಮಸ್ಯೆ ಹೆಚ್ಚಾಗಿದ್ದು, ಹಳ್ಳ ದಾಟಲು ಹೆದರಿ ಆರು ವಿದ್ಯಾರ್ಥಿಗಳು ಏಳನೇ ತರಗತಿ ನಂತರ ವಿದ್ಯಾಭ್ಯಾಸವನ್ನು ನಿಲ್ಲಿಸಿ ಮನೆಯಲ್ಲಿದ್ದಾರೆ.
ಶಿಕ್ಷಕರ ಕೊರತೆ!
ಮಹಿಮೆ ಗ್ರಾಮ ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮಪಂಚಾಯ್ತಿಯನ್ನು ಹೊಂದಿದೆ. ಹೀಗಾಗಿ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯು ಸಹ ಇದೆ. ಆದರೇ ಇರುವ ಮಕ್ಕಳ ಸಂಖ್ಯೆಗೆ ಇಬ್ಬರು ಮಾತ್ರ ಶಿಕ್ಷಕರಿದ್ದಾರೆ. 86 ಕ್ಕೂ ಹೆಚ್ಚು ಜನ ಮಕ್ಕಳಿದ್ದರೂ ಇಲ್ಲಿಗೆ ಹೊಸದಾಗಿ ವರ್ಗಾವಣೆ ಗೊಳ್ಳುವ ಶಿಕ್ಷಕರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ. ಒಂದು ವೇಳೆ ವರ್ಗವಾಗಿ ಬಂದರೂ ರಾಜಕೀಯ ಒತ್ತಡ ಬಳಸಿ ಬೇರೆಡೆ ವರ್ಗ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಹಲವು ವರ್ಷಗಳಿಂದ ಹಾಗೆಯೇ ಇದೆ. ಇಬ್ಬರು ಶಿಕ್ಷಕರು ಮಾತ್ರ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಹ ಕಷ್ಟಸಾಧ್ಯವಾಗಿದೆ.
ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸರ್ಕಾರ!
ಇಲ್ಲಿನ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಕಳೆದ ವರ್ಷ ಪಬ್ಲಿಕ್ ಟಿ.ವಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕುದ್ದು ಗ್ರಾಮಕ್ಕೆ ಆಗಮಿಸಿ ಇಲ್ಲಿನ ಸಮಸ್ಯೆ ಯನ್ನು ಆಲಿಸಿದ್ದರು. ವಿಧಾನ ಸಭೆಯಲ್ಲಿ ಕೂಡ ಪ್ರತಿಧ್ವನಿಸಿ ವಾಯುವ್ಯ ಸಾರಿಗೆಯಿಂದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಈ ಮಳೆಗಾಲದಲ್ಲಿ ಹೆಚ್ಚು ಮಳೆಯಾದ್ದರಿಂದ ಬಸ್ ಸಂಚಾರ ಸಹ ನಿಲ್ಲಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
ಮನವಿ ಸಲ್ಲಿಸಿ ಸುಸ್ತಾದ ಗ್ರಾಮಸ್ಥರು:
ಹಿಂದಿನ ಸಿಎಂ ಜಗದೀಶ್ ಶೆಟ್ಟರ್ ರಿಂದ ಹಿಡಿದು ಇಂದಿನ ಸಿಎಂ ಬೊಮ್ಮಾಯಿ ಅವರಿಗೆ ಸಹ ತಮ್ಮೂರಿನ ಸಮಸ್ಯೆ ಕುರಿತು ಇಲ್ಲಿನ ಜನ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಶಾಸಕ ಸುನಿಲ್ ನಾಯ್ಕ್ ಅವರಿಗೆ ಮನವಿ ಮಾಡಿ ಗ್ರಾಮಸ್ಥರು ಸುಸ್ತಾಗಿದ್ದಾರೆ.