ಮೈಸೂರು: ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿ ಯದುವಂಶಕ್ಕೆ ಅಧಿಕಾರ ಕೊಟ್ಟಿದ್ದರಿಂದ ರಾಜ್ಯಕ್ಕೆ ಲಾಭವಾಗಿದೆ. ಇದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಹತ್ಯೆಯಾಗದಿದ್ದರೆ ಕನ್ನಂಬಾಡಿ ಕಟ್ಟೆ ನಿರ್ಮಾಣವಾಗುತ್ತಿತ್ತಾ? ಮೈಸೂರು ವಿವಿ ನಿರ್ಮಿಸಲು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸುವ ಮೂಲಕ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡರು.
ಟಿಪ್ಪು ಧಾರಾವಾಹಿ ತೆಗೆಯಲು ಮೈಸೂರಿಗೆ ಬಂದಿದ್ದ ಬಾಲಿವುಡ್ ನಟ ಮೈ ಸುಟ್ಟುಕೊಂಡ. ಅಷ್ಟೇ ಅಲ್ಲದೇ ಟಿಪ್ಪು ಖಡ್ಗವನ್ನು ತಂದ ವಿಜಯ್ ಮಲ್ಯ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡ. ಮುಂದಿನ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಸಹ ಅಧಿಕಾರ ಸುಟ್ಟುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.
ಇದೀಗ ಟಿಪ್ಪು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ಹೆಸರು ತೆಗೆಯುವ ಮೂಲಕ ಸಿಎಂ ನಮ್ಮ ಹೋರಾಟಕ್ಕೆ ಹೆದರಿದ್ದಾರೆ. ನಾವು ಕಾರ್ಯಕ್ರಮಕ್ಕೆ ಬಂದರೆ ಟಿಪ್ಪುವಿನ ನಿಜಬಣ್ಣ ಬಯಲಾಗುತ್ತದೆ ಎಂಬ ಭಯ ಅವರಿಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ವ್ಯಂಗ್ಯವಾಡಿದರು.
ಟಿಪ್ಪು ಜಯಂತಿಯನ್ನು ವಿರೋಧಿಸಿ ಮಹಿಳೆಯರು ಕೈಯಲ್ಲಿ ಒನಕೆ ಹಿಡಿದು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಿಪ್ಪು ಜಯಂತಿ ವಿರೋಧಿಸಿ ಮೈಸೂರಿನಲ್ಲಿ pic.twitter.com/6gQuv6PxvO
— Pratap Simha (@mepratap) November 8, 2017
ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಮೈಸೂರು ಗಾಂಧಿ ವೃತ್ತದ ಬಳಿ ಬಿಜೆಪಿ ಮಹಿಳಾ ಮೋರ್ಚಾದಿಂದ ಒನಕೆ ಹಿಡಿದು ಪ್ರತಿಭಟನೆ. pic.twitter.com/MweuIaFIxT
— Pratap Simha (@mepratap) November 8, 2017