ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾದ ಶೂಟಿಂಗ್ ಕೆಲ ತಿಂಗಳ ಕಾಲ ನಿಲ್ಲಿಸಲಾಗಿತ್ತು. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ರಿಲೀಸ್ ಕಾರಣದಿಂದಾಗಿ ಸಲಾರ್ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆದಿದೆ. ಪ್ರಭಾಸ್, ಶ್ರುತಿ ಹಾಸನ್ ಸೇರಿದಂತೆ ಹಲವು ಕಲಾವಿದರು ಈ ಹಂತದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ ಚಿತ್ರೀಕರಣಕ್ಕೆ ಪ್ರಶಾಂತ್ ತೆರೆಳಬೇಕಿತ್ತು. ಗಾಯದ ಸಮಸ್ಯೆಯಿಂದಾಗಿ ಪ್ರಭಾಸ್ ವಿಶ್ರಾಂತಿ ತಗೆದುಕೊಳ್ಳುತ್ತಿದ್ದರು. ಇದೀಗ ಪ್ರಭಾಸ್ ಎಲ್ಲ ರೀತಿಯಿಂದಲೂ ಫಿಟ್ ಆಗಿದ್ದು, ಹಲವು ದಿನಗಳ ಕಾಲ ಇದೇ ಸಿನಿಮಾದ ಶೂಟಿಂಗ್ ನಲ್ಲಿ ಪ್ರಭಾಸ್ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಸಖತ್ ತಯಾರಿಯನ್ನೂ ಅವರು ಮಾಡಿಕೊಂಡಿದ್ದಾರೆ. ಅಲ್ಲದೇ, ಈ ಹಂತದಲ್ಲಿ ಮಹತ್ವದ ದೃಶ್ಯಗಳನ್ನು ಪ್ರಶಾಂತ್ ನೀಲ್ ಸೆರೆ ಹಿಡಿಯುತ್ತಿದ್ದಾರಂತೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್
ಸಲಾರ್ ತೆಲುಗು ಸಿನಿಮಾವಾಗಿದ್ದರಿಂದ, ಆನಂತರ ಬೇರೆ ಭಾಷೆಗಳಿಗೆ ಡಬ್ ಮಾಡುವುದರಿಂದ, ಕನ್ನಡದ ಕಲಾವಿದರಿಗೆ ಅಷ್ಟೇನೂ ಅವಕಾಶ ಸಿಕ್ಕಿಲ್ಲ. ಆದರೆ, ಕೆಜಿಎಫ್ ನಲ್ಲಿ ಮುದುಕ ಪಾತ್ರ ಮಾಡಿದ್ದ ಕೃಷ್ಣಜೀ ರಾವ್ ಅವರು ಸಲಾರ್ ನಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲೂ ಗುರುತಿಸುವಂತೆ ಪಾತ್ರವನ್ನು ಪ್ರಶಾಂತ್ ನೀಲ್ ನೀಡಿದ್ದಾರಂತೆ.