ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇಯಲ್ಲಿ (Bengaluru-Mysuru Expressway) ವೇಗದ ಮಿತಿ ಜಾರಿಯಾದ ಬಳಿಕ ಅಪಘಾತ (Accident) ಪ್ರಮಾಣ ಗಣನೀಯ ಇಳಿಕೆಯಾದ ಬೆನ್ನಲ್ಲೇ ವೇಗದ ಮಿತಿ (Speed Limit) ಹೆಚ್ಚಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಎಕ್ಸ್ಪ್ರೆಸ್ವೇ ಸಾವಿನ ಹೆದ್ದಾರಿ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ವಾಹನಗಳ ವೇಗದ ಮೇಲೆ ಕಣ್ಣಿಡುವ ಇಂಟರ್ಸೆಪ್ಟರ್ಗಳನ್ನು ಹೆದ್ದಾರಿಯಲ್ಲಿ ನಿಯೋಜಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದರು. ಇದು ಫಲ ನೀಡಿದ್ದು ಜುಲೈ ತಿಂಗಳಿನಲ್ಲಿ ಕಡಿಮೆ ಅಪಘಾತ ಸಂಭವಿಸಿದೆ.
ಸದ್ಯ ಎಕ್ಸ್ಪ್ರೆಸ್ವೇನಲ್ಲಿ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೇ ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೇಗ ಮಿತಿ ದಾಟಿದರೆ 1000 ರೂ. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೋ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ.
ಆಗಸ್ಟ್ 1 ರಿಂದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು, ಆಟೊ ರಿಕ್ಷಾ, ಟ್ರ್ಯಾಕ್ಟರ್, ಎತ್ತಿನಗಾಡಿ ಹಾಗು ಟಾಂಗಾಗಳ ಸಂಚಾರ ನಿಷೇಧ ಮಾಡಲಾಗಿದೆ. ಈ ವಾಹನಗಳ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಸೂಚನೆ ನೀಡಲಾಗುತ್ತಿದೆ. ಪ್ರವೇಶ ಮತ್ತು ನಿರ್ಗಮನ ಜಾಗದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯರು ರೈತರಿಗೆ ತಿಳುವಳಿಕೆ ಹೇಳಿ ಸರ್ವಿಸ್ ರಸ್ತೆಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಉದ್ಧಟತನ ತೋರಿದವರಿಗೆ ಮಾತ್ರ ದಂಡ ಹಾಕುವಂತೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಎಕ್ಸ್ಪ್ರೆಸ್ವೇಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 137 ಕೇಸ್
ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಸಂಚಾರ ನಿಷೇಧ ಮಾಡಿದ್ದರಿಂದ ಅಪಘಾತಗಳು ಕಡಿಮೆಯಾಗುವ ಸಾಧ್ಯತೆಯಿದ್ದು, ಮುಂದಿನ ಮೂರು ತಿಂಗಳಲ್ಲಿ ಅಪಘಾತದಿಂದ ಮರಣ ಪ್ರಮಾಣ ಒಂದಕ್ಕಿಂತ ಹೆಚ್ಚಾಗದಂತೆ ಇದ್ದರೆ ವೇಗ ಮಿತಿ ಹೆಚ್ಚಿಸುವ ಚಿಂತನೆ ಇದೆ. 100 ಕಿ.ಮೀ. ವೇಗಮಿತಿಯನ್ನ 120 ಕಿ.ಮೀ. ಗೆ ಹೆಚ್ಚಿಸಬಹುದು ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಹೆದ್ದಾರಿಯಲ್ಲಿ ಅಪಘಾತಗಳು ಕಡಿಮೆಯಾಗಿ ನಿಯಮ ಪಾಲನೆಯಾದರೆ ವೇಗದ ಮಿತಿ ಹೆಚ್ಚಿಸುವ ಸಾಧ್ಯತೆಯಿದೆ.
Web Stories