ಚಿಕ್ಕಮಗಳೂರು: ಸಿನಿಮಾ ಸ್ಟಾರ್ ಗಳು, ಕ್ರಿಕೆಟ್ ಪ್ಲೇಯರ್ಸ್ ಗಳು, ರಾಜಕಾರಣಿಗಳಿಗೆ ಅಭಿಮಾನಿಗಳಿರುವಂತೆ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಗೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಜನ ತಮ್ಮ ನೆಚ್ಚಿನ ನಾಯಕನ ಭಾವಚಿತ್ರವನ್ನ ಆಟೋ, ಬೈಕ್, ಕಾರುಗಳ ಮೇಲೆ ಹಾಕಿಕೊಳ್ಳುವಂತೆ ಕಾಫಿನಾಡಿನ ಅಣ್ಣಾಮಲೈ ಅಭಿಮಾನಿಗಳು ತಮ್ಮ ಹೀರೋವಿನ ಫೋಟೋವನ್ನ ಆಟೋಗಳ ಮೇಲೆ ಹಾಕಿಸಿಕೊಂಡಿದ್ದಾರೆ.
ನಗರದ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂಬದಿ ಅಣ್ಣಾಮಲೈ ಭಾವಚಿತ್ರ ಹಾಕಿದ್ದು, ಅದರ ಕೆಳಗೆ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಬದಿಯಲ್ಲಿ ಅಬ್ದುಲ್ ಕಲಾಂ ಭಾವಚಿತ್ರ ಹಾಕಿಸಿ ಅದರ ಕೆಳಗೆ ಸ್ವಾಭಿಮಾನಿ ಅಂತ ಬರೆದು ಕೊಂಡಿದ್ದಾನೆ.
ಜನಸಾಮಾನ್ಯರು ಎಲ್ಲರ ಫೋಟೋವನ್ನೂ ಹೀಗೆ ಹಾಕಿಕೊಳ್ಳುವುದಿಲ್ಲ. ಜನರ ಮನಸ್ಸಿನಲ್ಲಿ ಉಳಿದವರ ಫೋಟೋವನ್ನ ಮಾತ್ರ ಹಾಕಿಕೊಳ್ಳುತ್ತಾರೆ. ಕಾಫಿನಾಡಿನ ಆಟೋ ರಾಜರಿಗೆ ಅಣ್ಣಾಮಲೈ ಕೂಡ ಜನರ ಮನಸ್ಸಿನಲ್ಲಿ ಉಳಿದ ವ್ಯಕ್ತಿಯಾಗಿದ್ದಾರೆ. ಕಾಫಿನಾಡಿಗೆ ನೂರಾರು ಎಸ್ಪಿಗಳು ಬಂದು ಹೋಗಿದ್ದಾರೆ. ಆದರೆ ಎಲ್ಲರನ್ನೂ ಗೌರವಿಸಿರುವ ಮಲೆನಾಡಿಗರು ಅಣ್ಣಾಮಲೈರನ್ನ ಪ್ರೀತಿಸಿದ್ದಾರೆ. ಆ ಮನದಾಳದ ಪ್ರೀತಿಯೇ ಈಗ ಆಟೋಗಳ ಮೇಲೆ ಅವರ ಭಾವಚಿತ್ರ ಹಾಕಿಕೊಳ್ಳುವಂತೆ ಮಾಡಿದೆ. ಐಪಿಎಸ್ ಆಫೀಸರ್ ಆದರೂ ಕೂಡ ಅಹಂಕಾರವಿಲ್ಲದ ಅಣ್ಣಾಮಲೈ ಅವರ ಸರಳತೆ ಮಲೆನಾಡಿಗರನ್ನ ಮಂತ್ರಮುಗ್ಧರನ್ನಾಗಿಸಿದೆ ಎಂಬುದು ಜನರ ಅಭಿಪ್ರಾಯವಾಗಿದೆ.