ದಾವಣಗೆರೆ: ಸುದೀರ್ಘವಾಗಿ ದೇಶದ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಮರಳಿದ ವೀರ ಯೋಧನಿಗೆ ಅದ್ಧೂರಿಯಾದ ಸ್ವಾಗತ ಸಿಕ್ಕಿತು.
ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ನಿವೃತ್ತಿಯಾದ ಯೋಧ ಪ್ರಕಾಶ್ ನಾಯ್ಕ್ ಗೆ ಜನರು ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. 17 ವರ್ಷಗಳ ಕಾಲ ಪಂಜಾಬ್ನ ಜಲಂದರ್ ನಲ್ಲಿ ಪ್ರಕಾಶ್ ನಾಯ್ಕ್ ಅವರು ಸೇನಾ ಯೋಧರಾಗಿ ಕೆಲಸ ನಿರ್ವಹಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಿವೃತ್ತಿಯಾಗಿ ತವರೂರಾದ ದಾವಣಗೆರೆಯ ಆಲೂರುಹಟ್ಟಿ ಗ್ರಾಮಕ್ಕೆ ತೆರಳುವ ಮುನ್ನ, ದಾವಣಗೆರೆಯ ರೈಲ್ವೆ ನಿಲ್ದಾಣದ ಬಳಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ಮತ್ತಿತರರು ಸೇರಿ ವೀರ ಯೋಧನಿಗೆ ಅದ್ಧೂರಿಯಾಗಿ ಸ್ವಾಗತ ಮಾಡಿ ನಂತರ ಜೈ ಜವಾನ್ ಎಂದು ಘೋಷಣೆ ಕೂಗಿದರು.
ಯೋಧ ಪ್ರಕಾಶ್ ಮೊಟ್ಟ ಮೊದಲಿಗೆ ಸಿಕಂದರಬಾದ್ ನಲ್ಲಿ ಸೇವೆ ಸಲ್ಲಿಸಿದ್ದು, ನಂತರ ಸಿಕ್ಕಿಂ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿದ್ದಾರೆ. ಯೋಧನ ಸ್ವಗ್ರಾಮವಾದ ಆಲೂರಹಟ್ಟಿ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಸ್ವಾಗತ ಮಾಡಿಕೊಂಡರು.