ಚಿಕ್ಕಬಳ್ಳಾಪುರ: ಇಂದು ವಿಶ್ವ ರಕ್ತದಾನಿಗಳ ದಿನ, ವಿಶ್ವದ ಎಲ್ಲಾ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನ ಆಚರಿಸಿಲಾಗುತ್ತದೆ. ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ, ರಕ್ತದಾನ ಮಾಡುವುದರಲ್ಲಿ ಶತಕ ಮೀರಿಸಿದ ಅಪರೂಪದ ರಕ್ತದಾನಿ-ಮಹಾದಾನಿಯೊಬ್ಬರು ವ
ಆಡು ಮುಟ್ಟುದ ಸೊಪ್ಪಿಲ್ಲ, ಅನ್ನೋ ಹಾಗೆ ಇವರು ರಕ್ತದಾನ ಮಾಡದ ಪ್ರಖ್ಯಾತ ಆಸ್ಪತ್ರೆಗಳಿಲ್ಲ, ಶಿಬಿರಗಳಿಲ್ಲ. ಅವರೇ ಚಿಕ್ಕಬಳ್ಳಾಪುರ ನಗರದ ಸೂರ್ಯನಾರಾಯಣಶೆಟ್ಟಿ. ರಕ್ತದಾನವನ್ನೇ ಮಾಡಲು ಹಿಂಜರಿಯುತ್ತಿದ್ದ 80 ರ ದಶಕದಿಂದಲೂ ನಿರಂತರ ರಕ್ತದಾನ ಮಾಡುವ ಮೂಲಕ ಅದೆಷ್ಟೋ ಮಂದಿಯ ಪ್ರಾಣ ಉಳಿಸಿದ ಮಹಾದಾನಿ ಇವರು.
104 ಬಾರಿ ರಕ್ತದಾನ:
1982 ರಲ್ಲಿ ಮೊಟ್ಟ ಮೊದಲಿಗೆ ಆರಂಭವಾದ ಇವರ ರಕ್ತದಾನ 2009 ರವರೆಗೆ, 27 ವರ್ಷಗಳ ಕಾಲ ಸಾಗಿ ಬರೋಬ್ಬರಿ 104 ಬಾರಿ ರಕ್ತದಾನ ಮಾಡಿದ ಕೀರ್ತಿ, ಹೆಗ್ಗಳಿಕೆ ಈ ಸೂರ್ಯನಾರಾಯಣ ಶೆಟ್ಟಿಯವರದ್ದು. ಹೌದು ಗುರು ಪ್ರಿಂಟಿಂಗ್ ಪ್ರೆಸ್ ಮೂಲಕ ಬದುಕು ಕಟ್ಟಿಕೊಂಡಿದ್ದ ಸೂರ್ಯನಾರಾಯಣ ಶೆಟ್ಟಿಯವರಿಗೆ ಅದೊಂದು ದಿನ ತಮ್ಮ ಶ್ರೀಮತಿ ಹಾಗೂ ಸಂಬಂಧಿಕರೊಬ್ಬರ ರಕ್ತಕ್ಕೆ ಎದುರಾದ ಅಭಾವದ ಕಹಿ ಅನುಭವ, ಅವರನ್ನೇ ರಕ್ತದಾನ ಮಾಡುವಲ್ಲಿ ಪ್ರೇರೆಪಿಸಿತ್ತು.
ಸದ್ಯ ರಕ್ತದಾನ ಮಾಡಲು ವಯಸ್ಸು ಅಡ್ಡಿ.
ಇನ್ನೂ 18 ವರ್ಷ ಮೇಲ್ಪಟ್ಟು ಹಾಗೂ 60 ವರ್ಷ ವಯೋಮಾನದವರು ಮಾತ್ರ ರಕ್ತದಾನ ಮಾಡಬಹದು. ಅಂತೆಯೇ ಸದ್ಯ 68 ವರ್ಷದ ಸೂರ್ಯನಾರಾಯಣಶೆಟ್ಟಿಯವರು ತಮ್ಮ 60 ನೇ ವಯಸ್ಸಿನ ನಂತರ ವಯೋಸಹಜ ಸ್ಥಿತಿಯಿಂದ ರಕ್ತದಾನ ಮಾಡುತ್ತಿಲ್ಲ. ಆದ್ರೆ ಅವರು ರಕ್ತದಾನ ಮಾಡದಿದ್ದರೂ ಇತರರ ಕೈಯಲ್ಲಿ ರಕ್ತದಾನ ಮಾಡಿಸುವ ಕಾರ್ಯ ಮುಂದುವರೆಸಿದ್ದಾರೆ. ಈಗಲೂ ಹಲವು ರಕ್ತದಾನಿಗಳ, ರಕ್ತ ನಿಧಿ ಕೇಂದ್ರಗಳ ವ್ಯವಸ್ಥಾಪಕರ ಜೊತೆ ನಿರಂತರ ಸಂಪರ್ಕದಲ್ಲಿರುವ ಸೂರ್ಯನಾರಾಯಣ ಶೆಟ್ಟಿಯವರು ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಿದ್ದವರಿಗೆ ರಕ್ತ ಒದಗಿಸಿಕೊಡುವ ಕೆಲಸ ಮಾಡ್ತಾರೆ. ಇದಲ್ಲದೆ ರಕ್ತದಾನ ಶಿಬಿರಗಳನ್ನ ಆಯೋಜನೆ ಮಾಡುವುದು ಹಾಗೂ ಬೇರೋಬ್ಬರು ಆಯೋಜನೆ ಮಾಡುವ ರಕ್ತದಾನದ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಇರ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್:
ಸೋಷಿಯಲ್ ಮೀಡಿಯಾದ ಹಲವು ವಾಟ್ಸಪ್ ನ ರಕ್ತದಾನಿಗಳ ಗ್ರೂಪ್ ಗಳಲ್ಲೂ ಆಕ್ಟೀವ್ ಆಗಿರುವ ಸೂರ್ಯನಾರಾಯಣ ಶೆಟ್ಟಿಯವರು, ಸದಾ ರಕ್ತದಾನದ ಮಹತ್ತರ ಕಾಯಕದಲ್ಲಿ ಒಂದಲ್ಲ ಒಂದು ರೀತಿ ನಿರತರಾಗಿರುತ್ತಾರೆ. ಹೈದರಾಬಾದ್ ಬ್ಲಡ್ ಡೊನೇಟರ್ ಗ್ರೂಪ್ಸ್, ಕೊಪ್ಪಳ ರಕ್ತದಾನಿಗಳ ಗ್ರೂಪ್ ಸೇರಿದಂತೆ ಹಲವು ರಕ್ತದಾನಿಗಳ ವಾಟ್ಸಾಪ್ ಗ್ರೂಪ್ ಗಳಲ್ಲಿ ಆಕ್ಟೀವ್ ಆಗಿ ಇರ್ತಾರೆ . ಇನ್ನೂ ರಕ್ತ ಬೇಕಂತ ಯಾರಾದ್ರೂ ಮೇಸೆಜ್ ಮಾಡಿದರೆ ಸಾಕು ಥಟ್ ಅಂಥ ಪ್ರತಿಕ್ರಿಯಿಸ್ತಾರೆ. ರಕ್ತ ವನ್ನ ಒದಗಿಸುವ, ರಕ್ತದಾನಿಯ ಮಾಹಿತಿಯನ್ನ ನೀಡುವ ಸಲುವಾಗಿ ತಮ್ಮ ಕೈಲಾದ ಸಹಾಯವನ್ನ ಮಾಡ್ತಾರೆ. ಪತಿಯ ಈ ಕಾರ್ಯಕ್ಕೆ ಪತ್ನಿ ತೇಜಾವತಿಯವರೂ ಸಹ ಪ್ರೋತ್ಸಾಹಿಸುತ್ತಿದ್ದಾರೆ.
ಯಾವುದೇ ಪ್ರಚಾರದ ಬಯಕೆ ಇಲ್ಲದ ಸೂರ್ಯನಾರಾಯಣ ಶೆಟ್ಟಿ:
ಸೂರ್ಯನಾರಾಯಣರ ಸಮಾಜಮುಖಿ ಕಾರ್ಯಕ್ಕೆ ಸ್ವಯಂಪ್ರೇರಿತವಾಗಿ ಹಲವು ಸಂಘಟನೆಗಳು ಮುಂದೆ ಬಂದು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನ ನೀಡಿವೆ. ಆದ್ರೆ ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ರೂ ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಕನಿಷ್ಠ ಪ್ರಚಾರದ ಹುಚ್ಚು ಇಲ್ಲದೆ ಸೂರ್ಯನಾರಾಯಣಶೆಟ್ಟಿಯವರು ತಮ್ಮ ಸೇವೆ ಮುಂದುವೆರೆಸಿಕೊಂಡು ಹೋಗುತ್ತಿದ್ದಾರೆ. 104 ಬಾರಿ ರಕ್ತ ಕೊಟ್ಟಿದ್ರೂ ಇದುವರೆಗೂ ತಮ್ಮ ನೆನೆಪಿಗಾಗಲೀ ಅಥವಾ ಪ್ರಚಾರಕ್ಕಾಗಲಿ ರಕ್ತದಾನ ಮಾಡುವ ಕನಿಷ್ಠ ಒಂದು ಫೋಟೋ ಕೂಡ ಇಟ್ಟುಕೊಂಡಿಲ್ಲ. ಸದ್ಯ ಇದ್ದ ಏಕೈಕ ಮಗಳಿಗೆ ಮದುವೆ ಮಾಡಿ ಹಾಯಾಗಿರೋ ಸೂರ್ಯನಾರಾಯಣ ಶೆಟ್ಟಿಯವರು ಸ್ನೇಹಿತರ ಪಾಲುದಾರಿಕೆಯ ಫೈನಾನ್ಸ್ ಕಂಪನಿಯಲ್ಲಿ ತಮ್ಮನ್ನ ತೊಡಗಿಸಿಕೊಂಡು ಪತ್ನಿ ಜೊತೆ ಸುಂದರ ಸಂಸಾರ ಸಾಗಿಸುತ್ತಾ ಬದುಕು ಸವೆಸುತ್ತಿದ್ದಾರೆ. ವಿಶ್ವರಕ್ತದಾನಿಗಳ ದಿನ ಇಂತಹ ರಕ್ತದಾನಿ-ಮಹಾದಾನಿಗೆ ನಮ್ಮ-ನಿಮ್ಮದೊಂದು ಸಲಾಂ.