ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆರ್ಎಸ್ಎಸ್ ನಾಯಕರು ಬದಲಾಯಿಸಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಆರ್ಎಸ್ಎಸ್ನವನಲ್ಲ. ಹೀಗಾಗಿ ಬೊಮ್ಮಾಯಿಯನ್ನು ಬದಲಾಯಿಸಲು ಆರ್ಎಸ್ಎಸ್ನವರು ಹೊರಟಿದ್ದಾರೆ. ಬೊಮ್ಮಾಯಿ ಜನತಾ ಪರಿವಾರದವನು. ನಮ್ಮ ಜೊತೆಯಲ್ಲೇ ಇದ್ದ. ಆದರೆ ಅವನು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದರು. ಇದನ್ನೂ ಓದಿ: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ವಿಳಂಬ – ಸ್ಯಾಂಕಿ ಬಳಿ ಪ್ರತಿಭಟನೆ
ರಾಜ್ಯದಲ್ಲಿ ರಾಜ್ಯ ಸರ್ಕಾರ ಸತ್ತು ಹೋಗಿದೆ. ಗೃಹ ಸಚಿವರು ಅತ್ಯಂತ ಅಸಮರ್ಥ ಸಚಿವ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇವರಿಗೆ ಆಡಳಿತ ಮಾಡುವುದಕ್ಕೆ ಬರ್ತಿಲ್ಲ. ಎಲ್ಲ ಪರೀಕ್ಷೆಗಳಲ್ಲೂ ದುಡ್ಡು ದುಡ್ಡು ಎನ್ನುತ್ತಿದ್ದಾರೆ. ದುಡ್ಡು ಕೊಟ್ಟು ಬಂದ ಅಧಿಕಾರಿಗಳು ಇವರ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ತಿರುಗೇಟು ಕೊಟ್ಟ ಇವರು, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು? ಅಪ್ಪ-ಮಕ್ಕಳು ಅಲ್ವಾ? ಅಂದ್ರೆ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆಯಾ? ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ಆದರೆ ಸರ್ಕಾರಕ್ಕೆ ನಿಭಾಯಿಸಲು ಬರುತ್ತಿಲ್ಲ. ಕಲ್ಲಿದ್ದಲು ಹೆಚ್ಚಾಗಿಯೇ ಇದೆ. ಆದರೆ ಅದನ್ನು ಹಂಚಿಕೆ ಮಾಡಲು ಇವರಿಗೆ ಬರುತ್ತಿಲ್ಲ. ಇಂತಹ ಆಡಳಿತದಿಂದ ಕಷ್ಟ ಎದುರಾಗುತ್ತಿದೆ. ಕೃತಕ ಕೊರತೆ ಸೃಷ್ಟಿಯನ್ನು ಮಾಡುತ್ತಿದ್ದಾರೆ. ದಿಢೀರನೆ ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ
ಈ ಕುರಿತು ಅಧಿಕಾರಿಗಳು ಯಾವ ಸಚಿವರ ಮಾತನ್ನು ಕೇಳುತ್ತಿಲ್ಲ. ಸಚಿವರಿಗೆ ಇದರ ಬಗ್ಗೆ ಜ್ಞಾನವಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಕರ್ನಾಟಕ ಎಂದೂ ನೋಡಿರಲಿಲ್ಲ. ಇದೊಂದು ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.