ಕೊಪ್ಪಳ: ಒಂದೆಡೆ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ರಾಜ್ಯಾದ್ಯಂತ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮದುವೆ ಕಾರ್ಯಕ್ರಮದ ವೇದಿಕೆಯಲ್ಲೇ ಕೊಪ್ಪಳ (Koppal) ಜಿಲ್ಲೆಯ 5 ಅಭ್ಯರ್ಥಿಗಳನ್ನ ಘೋಷಣೆ ಮಾಡುವ ಮೂಲಕ ಡಿಕೆಶಿಗೆ ಸೆಡ್ಡು ಹೊಡೆದಿದ್ದಾರೆ.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ ಸಂಬಂಧಿಯೊಬ್ಬರ ಮದುವೆಯಲ್ಲಿ (Marriage) ಭಾಗವಹಿಸಲು ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮಕ್ಕೆ ಇಂದು ಆಗಮಿಸಿದ್ದ ಸಿದ್ದರಾಮಯ್ಯ, ಮದುವೆ ಕಾರ್ಯಕ್ರಮದಲ್ಲೂ ರಾಜಕೀಯ ಭಾಷಣ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಥೇಟ್ ರಾಜಕೀಯ ಸಮಾವೇಶದಂತೆ ಕಂಡುಬಂದ ಮದುವೆಯಲ್ಲಿ ಎಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಫೋಟೊ ಕಾಣದಂತೆ ನೋಡಿಕೊಂಡಿದ್ದಾರೆ.
ಕಾಣದ ಡಿಕೆಶಿ ಕಟೌಟ್: ಮದುವೆ ಮಂಟಪಕ್ಕೆ ತೆರಳುವ ರಸ್ತೆಯ ಎರಡೂ ಬದಿಯಲ್ಲಿ ಕಾಂಗ್ರೆಸ್ ನಾಯಕರು (Congress Leaders) ಮತ್ತು ಸ್ವಾಮೀಜಿಗಳ ಕಟೌಟ್ ಕಂಡು ಬಂದವು. ಆದರೆ ಎಲ್ಲೂ ಕೂಡ ಡಿಕೆಶಿ ಅವರ ಒಂದು ಸಣ್ಣ ಫೋಟೊ ಕೂಡ ಕಾಣಸಿಗಲಿಲ್ಲ. ಇದನ್ನೂ ಓದಿ: ಮಂಗ್ಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯ ದೇಹ 45% ಸುಟ್ಟಿದೆ – ಮಾತನಾಡುವ ಪರಿಸ್ಥಿತಿಯಲ್ಲಿಲ್ಲ: ಅಲೋಕ್ ಕುಮಾರ್
ರಾಜಕೀಯ ಭಾಷಣ: ನೆಪಕ್ಕೆ ಎನ್ನುವಂತೆ ವಧು- ವರರಿಗೆ ಶುಭಕೋರಿದ ಸಿದ್ದರಾಮಯ್ಯ, ಅದೇ ವೇದಿಕೆ ಮೇಲೆ ರಾಜಕೀಯ ಭಾಷಣ ಶುರು ಮಾಡಿದ್ರು. ಒಂದೆಡೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅವಕಾಶಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಕೊಪ್ಪಳದ ಕನಕಗಿರಿಗೆ ಶಿವರಾಜ ತಂಗಡಗಿ, ಕುಷ್ಟಗಿ ಕ್ಷೇತ್ರಕ್ಕೆ ಅಮರೇಗೌಡ ಭಯ್ಯಾಪೂರ, ಯಲಬುರ್ಗಾಕ್ಕೆ ಬಸವರಾಜ ರಾಯರೆಡ್ಡಿ, ಕೊಪ್ಪಳಕ್ಕೆ ರಾಘವೇಂದ್ರ ಹಿಟ್ನಾಳ ಹಾಗೂ ಗಂಗಾವತಿ ಕ್ಷೇತ್ರದಿಂದ ಇಕ್ವಾಲ್ ಅನ್ಸಾರಿಗೆ ಮತ ನೀಡುವಂತೆ ನೆರೆದಿದ್ದ ಜನರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗೆಳತಿ ಕೊಂದು, ಮೃತದೇಹವನ್ನು 4 ದಿನ ಮೆಡಿಕಲ್ ಸ್ಟೋರ್ನಲ್ಲೇ ಇಟ್ಕೊಂಡಿದ್ದ ಕಿಲ್ಲರ್
ಡಿಕೆಶಿಗೆ ಟಾಂಗ್: ಕಾಂಗ್ರೆಸ್ ಬ್ಯಾನರ್ನಡಿ ಕಾರ್ಯಕ್ರಮ ಮಾಡಿದ್ರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗಮನಕ್ಕೆ ತರಬೇಕಾಗುತ್ತೆ ಎಂಬ ಕಾರಣಕ್ಕೆ ಮದುವೆ ನೆಪದಲ್ಲಿ ಸಿದ್ದರಾಮಯ್ಯ ಸಮಾವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ತಮ್ಮ ಬೆಂಬಲಿಗರಿಗೆ ಟಿಕೆಟ್ ಫಿಕ್ಸ್ ಎಂಬ ಸಂದೇಶ ನೀಡಿದ್ದಾರೆ ಅನ್ನೋ ಚರ್ಚೆ ಕಾಂಗ್ರೆಸ್ ಪಕ್ಷದಲ್ಲೇ ಹುಟ್ಟಿಕೊಂಡಿದೆ. ಆದರೆ ಈ ಬೆಳವಣಿಗೆ ತಮಗೂ ಟಿಕೆಟ್ ಬೇಕು ಅಂತಾ ಅರ್ಜಿ ಸಲ್ಲಿಸಿದ್ದ ಕೊಪ್ಪಳ ಜಿಲ್ಲೆಯ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.