ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆ ಈಗಾಗಲೇ ಡೇಟ್ ಫಿಕ್ಸ್ ಮಾಡಿದೆ. ಈ ನಡುವೆ, ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾದ್ರೆ ಮಠಕ್ಕೆ ಭದ್ರತೆ ಕೊಡಲು ಸಿದ್ಧ ಅಂತಾ ಯುವ ಕಾಂಗ್ರೆಸ್ ಹೇಳಿದೆ. ಈ ಮೂಲಕ ಘಟನೆಗೆ ರಾಜಕೀಯ ಬಣ್ಣ ಬಂದಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಇಫ್ತಾರ್ ಸಭೆ ವಿರುದ್ಧ ಶ್ರೀರಾಮ ಸೇನೆ ತಗಾದೆ ಎತ್ತಿತ್ತು. ಪ್ರಮೋದ್ ಮುತಾಲಿಕ್ ಸ್ವಾಮೀಜಿಯವರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ರು. ವಿಶ್ವೇಶತೀರ್ಥರ ಉತ್ತರದಿಂದ ಸಂತುಷ್ಟರಾಗದ ಮುತಾಲಿಕ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆ ನಡೆಸದಂತೆ ಹಿಂದೂ ಮುಖಂಡರು ಮುತಾಲಿಕ್ ಗೆ ಒತ್ತಡ ಹೇರಿದ್ದರು. ಆದ್ರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವ ಪ್ರಮೇಯವೇ ಇಲ್ಲ ಅಂತ ಶ್ರೀರಾಮಸೇನೆ ಸ್ಪಷ್ಟಪಡಿಸಿದೆ.
ಇದನ್ನೂಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್
ಶ್ರೀರಾಮ ಸೇನೆ ಜಿಲ್ಲಾ ವಕ್ತಾರ ಜಯರಾಂ ಮಾತನಾಡಿ, ಪ್ರತಿಭಟನೆಯಿಂದ ನಾವು ಹಿಂದೆ ಸರಿಯಲ್ಲ. ಪ್ರತಿಭಟನೆ ನಡೆಸಿಯೇ ಸಿದ್ಧ ಎಂದಿದ್ದಾರೆ. ನಾವು ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಯುವ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿವೆ. ಪೇಜಾವರ ಶ್ರೀಗಳು ನಮ್ಮ ಗುರುಗಳು- ನಾವೆಲ್ಲಾ ಅವರ ಶಿಷ್ಯರು. ನಾವು ಯಾವತ್ತೂ ಸ್ವಾಮೀಜಿಗಳ ಬೆಂಬಲಕ್ಕೆ ಇದ್ದೇವೆ. ಇಫ್ತಾರ್ ಕೂಟ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ನಮ್ಮ ವಿರೋಧವೇನಿದ್ದರೂ ಕೃಷ್ಣಮಠದಲ್ಲಿ ನಡೆದ ನಮಾಜ್ ವಿಚಾರಕ್ಕೆ ಮಾತ್ರ ಎಂದರು. ಜುಲೈ 2ರಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡುತ್ತೆವೆ. ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯಲಿದೆ ಎಂದರು.
ಮಠಕ್ಕೆ ಭದ್ರತೆ: ಜುಲೈ 2ರಂದು ರಾಜ್ಯದಾದ್ಯಂತ ಶಾಂತ ರೀತಿಯ ಪ್ರತಿಭಟನೆ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದೆ. ಈ ನಡುವೆ ಶ್ರೀರಾಮ ಸೇನೆ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಗುಲ್ಲೆದ್ದಿದೆ. ಮಠಕ್ಕೆ ಮುತ್ತಿಗೆ ಹಾಕುವುದಾದರೆ ಯುವ ಕಾಂಗ್ರೆಸ್ ಮಠಕ್ಕೆ ಭದ್ರತೆ ನೀಡುವುದಾಗಿ ಹೇಳಿದೆ. ಶ್ರೀರಾಮಸೇನೆಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೃಷ್ಣಮಠವನ್ನು ಶ್ರೀರಾಮ ಸೇನೆ ಗುತ್ತಿಗೆಗೆ ಪಡೆದಿಲ್ಲ. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದೇವೆ, ಅವರಿಗೆ ಧೈರ್ಯ ಹೇಳಿದ್ದೇವೆ. ಶ್ರೀರಾಮಸೇನೆ ಮುತ್ತಿಗೆ ಹಾಕಿದ್ರೆ ಮಠದ ಸುತ್ತಲೂ ಮಾನವ ಸರಪಳಿ ರಚಿಸಿ ಭದ್ರತೆ ಕೊಡುವುದಾಗಿ ಹೇಳಿದರು.
ಇದನ್ನೂ ಓದಿ: ನವೆಂಬರ್ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
ಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಭಾರೀ ವಿವಾದ ಎಬ್ಬಿಸಿದ ಬೆನ್ನಲ್ಲೇ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ನಲ್ಲಿ ಸೌಹಾರ್ದ ಈದ್ ಆಚರಣೆ ನಡೆದಿದೆ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ, ಶೀರೂರು ಲಕ್ಷ್ಮೀವರಶ್ರೀ, ಮುಸ್ಲೀಂ ಧರ್ಮಗುರು ಮೌಲಾನ ಅಬ್ದುಲ್ ರಹೀಮಾನ್ ರಜ್ವೀ ಕಲ್ಕಟ್ ಜೊತೆ ಸೇರಿ ಈದ್ ಸೌಹಾರ್ದ ಕೂಟ ಆಯೋಜಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರಕ್ಕೆ ಉಡುಪಿಯಲ್ಲಿ ಮುಹೂರ್ತ!?- ಪೇಜಾವರಶ್ರೀ ಹೇಳಿದ್ದಿಷ್ಟು