ಶಿವಮೊಗ್ಗ: ಮುಂಜಾನೆಯ ಚುಮು ಚುಮು ಚಳಿಯಲ್ಲೇ ಸಾಗರದ ಗಣಪತಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ನೂರಾರು ಮಂದಿ ಕಸರತ್ತು ನಡೆಸಿದರು.
ಇಂದು ಮುಂಜಾನೆಯೇ ಗಣಪತಿ ಕೆರೆಯ ದಂಡೆಯ ಮೇಲೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಆಗಮಿಸಿ ಕೆರೆಯ ಹೂಳು ತೆಗೆಯುವುದು, ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕ ಹರತಾಳು ಹಾಲಪ್ಪ ಸಹ ಬೋಟಿನಲ್ಲಿ ಕುಳಿತು ಹೂಳು ದಬ್ಬುವ ಕಾರ್ಯ ಮಾಡಿದರು.
ಸುಮಾರು 5 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 5 ಬೋಟ್, 1 ಜೆಸಿಬಿ, ಹಾಗೂ ಟ್ರ್ಯಾಕ್ಟರ್ಗಳನ್ನು ಬಳಸಲಾಗಿತ್ತು. ಕೆರೆಯಿಂದ ತೆಗೆದ ಹೂಳನ್ನು ಇನ್ನೊಂದು ದಡದಲ್ಲಿ ಸಂಗ್ರಹಿಸಿದ್ದು, ಅದನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ. ಈ ಗಣಪತಿ ಕೆರೆ ಕಾಯಕಲ್ಪಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.