ಶಿವಮೊಗ್ಗ: ರಾಜ್ಯದಲ್ಲಿ ನಡೆಯಬಹುದಾಗಿದ್ದ ಗ್ಯಾಂಗ್ ವಾರ್ ಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿರುವ ರೌಡಿ ಶೀಟರ್ ಕೊರಂಗು ಕೃಷ್ಣನ ಹತ್ಯೆಗೆ ಸವಿದೇಶದಲ್ಲಿ ಭೂಗತನಾಗಿರುವ ಹೆಬ್ಬೆಟ್ಟು ಮಂಜ ರೂಪಿಸಿದ ಈ ಸಂಚನ್ನು ಶಿವಮೊಗ್ಗ ಪೊಲೀಸರು ವಿಫಲಗೊಳಿಸಿದ್ದಾರೆ.
ಹೆಬ್ಬೆಟ್ಟು ಮಂಜನ ತನ್ನ ಸಹಚರ ಅಂಬರೀಶ್ ಎಂಬಾತನ ಮೂಲಕ ಶಿವಮೊಗ್ಗದಲ್ಲಿ ಇರುವ ಸಹಪಾಠಿ ಅಶ್ರಫ್ ಗೆ ಒಂದು ಪಿಸ್ತೂಲ್ ತಲುಪಿಸಿದ್ದ. ಅಲ್ಲದೆ ಈತನಿಂದಲೇ ಒರಿಸ್ಸಾದ ಬೆಹರಾಂಪುರದಿಂದ ಐದು ಪಿಸ್ತೂಲ್ ತರಿಸಿದ್ದ. ಒಟ್ಟು ಆರು ಪಿಸ್ತೂಲ್ ತಲುಪಿಸಿ, ನಾ ಹೇಳುವವರೆಗೂ ನಿನ್ನ ಬಳಿಯೇ ಇರಲಿ, ಬೆಂಗಳೂರಿನಿಂದ ನನ್ನ ಕಡೆಯವರು ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದ.
ಬೇರೆಬೇರೆ ವ್ಯವಹಾರ ಮಾಡಿ, ನಷ್ಟದಲ್ಲಿದ್ದ ಆಶ್ರಫ್ ಈ ಪಿಸ್ತೂಲ್ ಗಳನ್ನು ಮಾರಾಟ ಮಾಡಲು ಮುಂದಾದ. ಇದಕ್ಕಾಗಿ ಸ್ನೇಹಿತ ನದೀಮ್ ಎಂಬಾತನ ನೆರವು ಪಡೆದ. ಇವುಗಳಲ್ಲಿ ಎರಡು ಪಿಸ್ತೂಲ್ ಗಳನ್ನು ಮಂಡಗದ್ದೆ ಬಳಿ ಲಿಂಗಾಪುರದ ಮಥಾಯ್ ಎಂಬಾತನಿಗೆ ಮಾರಿದ್ದ. ಆದರೆ ಗುಂಡುಗಳನ್ನು ಕೊಟ್ಟಿರಲಿಲ್ಲ. ಕಳೆದ ವಾರ ಗುಂಡು ಕೊಡಲು ಹಾಗೂ ಉಳಿದ ಪಿಸ್ತೂಲ್ ಗಳ ಮಾರಾಟಕ್ಕೆ ಮುಂದಾದಾಗ ಶಿವಮೊಗ್ಗ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ. ಪೊಲೀಸರು ನಾಲ್ಕು ಪಿಸ್ತೂಲ್ ಹಾಗೂ 48 ರೌಂಡ್ಸ್ ವಶ ಪಡಿಸಿಕೊಂಡಿದ್ದಾರೆ.
ಇವುಗಳಲ್ಲಿ ಮೂರು ಪಿಸ್ತೂಲ್ ವಿದೇಶಿ ಕಂಪನಿಯವು. ಒಂದು ದೇಶಿ. ಈ ಮುಂಚೆಯೇ ಮಾರಾಟ ಮಾಡಿದ್ದ ಎರಡು ಪಿಸ್ತೂಲ್ ಸಮೇತ ನಾಪತ್ತೆ ಆಗಿರುವ 5 ಮಂದಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.