ತುಮಕೂರು: ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನೋತ್ಸವ ಹಿನ್ನೆಲೆ ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದ್ದಾರೆ.
ತುಮಕೂರು ವಿವಿಯ ಹೆಲಿಪ್ಯಾಡಲ್ಲಿ ಇಳಿದ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆಗರ ಜ್ಞಾನೇಂದ್ರ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ
ನಂತರ ಕಾರಿನ ಮೂಲಕ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಅಮಿತ್ ಶಾ ಅವರು, ಶ್ರೀಗಳ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರ ಬಸವ ಭಾರತ ಹೆಸರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ಹಲವಾರು ಸಾಧು ಸಂತರು ಭಾಗವಹಿಸಿದ್ದರು. ಅಲ್ಲದೇ ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು 10 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ
ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಹಿನ್ನೆಲೆ ಸುಮಾರು 1.5 ರಿಂದ 2 ಲಕ್ಷ ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಉಪ್ಪಿಟ್ಟು, ಕೇಸರಿಬಾತ್, ಬೂಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳ ಊಟ, ತಿಂಡಿಯ ವ್ಯವಸ್ಥೆಗೊಳಿಸಲಾಗಿದೆ.
ಇಂದು ಬೆಳಗ್ಗಿನಿಂದಲೇ ಸಿದ್ದಗಂಗಾ ಮಠದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಅಮಿತ್ ಶಾ ಸಹ ಆಗಮಿಸಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟಂತೆ ಆಗಿದೆ. ಅಮಿತ್ ಶಾ ಆಗಮನದ ಹಿನ್ನೆಲೆ 04 ಎಸ್ಪಿ, 10 ಡಿ.ವೈ.ಎಸ್ಪಿ, ಕೆ.ಎಸ್.ಆರ್.ಪಿ., ಡಿಆರ್ ಸೇರಿದಂತೆ 2 ಸಾವಿರ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.