ಭೋಪಾಲ್: ಬುರ್ಹಾನ್ಪುರ್ ಜೈಲಿನಿಂದ ಆಗ ತಾನೇ ಹೊರಬಂದಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುಪ್ತೇಶ್ವರ್ ದೇವಸ್ಥಾನ ಪ್ರದೇಶದಲ್ಲಿನ ಅಮ್ರಾವತಿ ಹೆದ್ದಾರಿಯ ಬಳಿ ನಡೆದಿದೆ.
ಆರೋಪಿ ರಮ್ಜಾನ್ ಸಂತ್ರಸ್ತೆಯನ್ನ ನಡುರಸ್ತೆಯಲ್ಲಿ ನಗ್ನ ಮಾಡಿ ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದು, ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ. ಇದರಿಂದ ಸಂತ್ರಸ್ತೆಯ ಮೈ ಮೇಲೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಸಂತ್ರಸ್ತೆ ನಿರಂತರವಾಗಿ 20 ನಿಮಿಷಗಳ ಕಾಲ ಹಲ್ಲೆ ಮಾಡಿದ ವ್ಯಕ್ತಿ ಜೊತೆ ಹೋರಾಡಿದ್ದಾರೆ. ದೇಹವೆಲ್ಲಾ ರಕ್ತಸಿಕ್ತವಾಗಿ, ಆತನಿಂದ ತಪ್ಪಿಸಿಕೊಳ್ಳಲು ನಗ್ನವಾಗಿಯೇ ಸುಮಾರು ಅರ್ಧ ಕಿ.ಮೀ ದೂರ ಸಹಾಯಕ್ಕಾಗಿ ಓಡಿದ್ದಾರೆ. ಇದನ್ನು ನೋಡಿದ ಮತ್ತೊಬ್ಬ ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ಅಷ್ಟೂ ಹೊತ್ತು ಸಂತ್ರಸ್ತೆಯ ಬಟ್ಟೆ ರಸ್ತೆಯಲ್ಲಿ ಬಿದ್ದಿತ್ತು. ನಂತರ ಮಹಿಳೆ ಬಟ್ಟೆಯನ್ನು ಸಂತ್ರಸ್ತೆಯ ಮೇಲೆ ಹೊದಿಸಿ, ಹೆದ್ದಾರಿವರೆಗೆ ಕರೆದುಕೊಂಡು ಹೋಗಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ರಮ್ಜಾನ್ ಈ ಹಿಂದೆ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಾನು ಪೊಲೀಸರಿಗೆ ದೂರು ನೀಡಿದ್ದರೂ ಅವರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಿಟ್ಟು ಕಳಿಸಿದ್ದರು. ಎರಡು ವಾರಗಳ ಹಿಂದೆ ಮತ್ತೆ ಆರೋಪಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಆಗಲೂ ಪೊಲೀಸರಿಗೆ ಆತನ ವಿರುದ್ಧ ದೂರು ನೀಡಿದ್ದೆ. ಆಗ ಪೊಲೀಸರು ಮತ್ತೆ ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಪೊಲೀಸರು ನಾನು ಕೊಟ್ಟ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.
ಈಗ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ವೈದ್ಯರು ಇಂದೋರ್ಗೆ ರವಾನಿಸಲು ಹೇಳಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307, 294, 323, 324 ಮತ್ತು 506ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆಯ ಪತಿ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಮ್ಕಕಳನ್ನು ಸಾಕಲು ದುಡಿಯುತ್ತಿದ್ದರು. ಜಮೀನಿನ ಕೆಲಸ ಮತ್ತು ಕಾಡಿನಿಂದ ಜಾನುವಾರುಗಳಿಗೆ ಮೇವು ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದರು. ಮಹಿಳೆ ಒಬ್ಬರೇ ಕೆಲಸ ಮಾಡುವುದನ್ನು ನೋಡಿದ್ದ ಆರೋಪಿ ರಮ್ಜಾನ್, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪ್ರತಿ ಬಾರಿಯೂ ಮಹಿಳೆ ಇದಕ್ಕೆ ವಿರೋಧಿಸಿದ್ದರು. ಆದ್ರೆ ಒಂದು ದಿನ ಅತ್ಯಾಚಾರ ಮಾಡಿಯೇಬಿಟ್ಟ. ಅನಂತರವೂ ಹಲವು ಬಾರಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ. ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರೇ ಹೊರತು ಈವರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿರಲಿಲ್ಲ ಎಂದು ವರದಿಯಾಗಿದೆ.