ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ನ (Congress) ಭವಿಷ್ಯವು ಪಕ್ಷದ ಕಾರ್ಯಕರ್ತರ ಕೈಯಲ್ಲಿದೆ. ಫಲಿತಾಂಶ ಏನೇ ಇರಲಿ, ಹಳೆಯ ಪಕ್ಷದ ಪುನರುಜ್ಜೀವನವು ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಶಶಿ ತರೂರ್ (Shashi Tharoor) ಹೇಳಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಗೆ ಪ್ರಬಲ ಪೈಪೋಟಿ ಇದೆ ಅದಾಗ್ಯೂ ನನಗೆ ಗೆಲ್ಲುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಖರ್ಗೆ ಜೊತೆಗೆ ನಾನು ಮಾತನಾಡಿದ್ದೇನೆ. ನಾವು ಸಹೋದ್ಯೋಗಿಗಳು ಮತ್ತು ಸ್ನೇಹಿತರು ಎಂದು ಹೇಳಿದರು. ಇದನ್ನೂ ಓದಿ: ಈ ಕ್ಷಣಕ್ಕೆ ನಾನು ಬಹಳ ದಿನದಿಂದ ಕಾಯುತ್ತಿದ್ದೆ: ಸೋನಿಯಾ ಗಾಂಧಿ
ಇತ್ತ ಶಶಿ ತರೂರ್ ಬಗ್ಗೆ ಮಾತನಾಡಿದ ಮತ್ತೋರ್ವ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಇದು ನಮ್ಮ ಆಂತರಿಕ ಚುನಾವಣೆಯ ಭಾಗವಾಗಿದೆ. ನಾವು ಪರಸ್ಪರ ಸ್ನೇಹದಿಂದ ಮಾತನಾಡುತ್ತೇವೆ. ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಕಟ್ಟಬೇಕು. ಶಶಿ ತರೂರ್ ನನಗೆ ದೂರವಾಣಿ ಕರೆ ಮಾಡಿ ನನಗೆ ಶುಭ ಹಾರೈಸಿದರು ಮತ್ತು ನಾನು ಕೂಡ ಶುಭ ಹಾರೈಸಿದ್ದೇನೆ ಎಂದರು. ಇದನ್ನೂ ಓದಿ: ಬಿಜೆಪಿ ಹವಾ ಕುಗ್ಗಿಸಲು ಕಾಂಗ್ರೆಸ್ ಯಾತ್ರೆ ಅಸ್ತ್ರ – ಮುಂದಿನ ಟಾರ್ಗೆಟ್ ಕರಾವಳಿ, ಮುಂಬೈ ಕರ್ನಾಟಕ
ಕಳೆದ ಎರಡು ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರ ವಿರುದ್ಧ ಶಶಿ ತರೂರ್ ಅಸಮಾಧಾನ ಹೊರ ಹಾಕಿದ್ದರು. ಎಲ್ಲ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡುತ್ತಿದ್ದಾರೆ, ಸೇಫ್ ಗೇಮ್ ಆಡುತ್ತಿದ್ದಾರೆ. ನನ್ನನ್ನು ಪ್ರತ್ಯೇಕವಾಗಿ ನೋಡಲಾಗುತ್ತಿದೆ ಎಂದು ಗುಡುಗಿದ್ದರು.