ಕಲಬುರಗಿ: ಕನ್ನಡ ಚಿತ್ರರಂಗದ ಮೇರು ನಟ ಯುವರತ್ನ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳು ಉರುಳಿವೆ. ಆದರೆ, ಅಪ್ಪು ನೆನಪಲ್ಲಿ ಅದೆಷ್ಟೋ ಒಳ್ಳೆ ಕಾರ್ಯಗಳು ನಿತ್ಯವೂ ನಡೆಯುತ್ತಿವೆ. ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರವಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಪುನೀತ್ ರಾಜ್ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭುವೇ ಎಂದು ಅಪ್ಪು ಅಭಿಮಾನಿಯೊಬ್ಬರು ಬರೆದಿರುವ ಚೀಟಿ ದೇವರ ಹುಂಡಿಯಲ್ಲಿ ಸಿಕ್ಕಿದೆ.
ಕಲಬುರಗಿಯ ಅಫಜಲಪುರ ತಾಲೂಕಿನ ಸುಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಅಭಿಮಾನಿ ಬರೆದಿರುವ ಚೀಟಿ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆತಿದೆ. ಅಪ್ಪು ಅವರನ್ನು ಮತ್ತೆ ಕಳುಹಿಸಿ ಎಂದು ದೇವರ ಮೊರೆ ಹೋಗಿರುವ ಈ ವಿಚಾರ ಭಾವನಾತ್ಮಕವಾಗಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ
ಸದ್ಯ ಇತ್ತೀಚೆಗಷ್ಟೇ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಅಪ್ಪು ಡ್ಯಾನ್ಸ್, ಫೈಟ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೇಮ್ಸ್ ಸಿನಿಮಾಕ್ಕೆ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಅಪ್ಪುಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ಹಲವಾರು ಕಲಾವಿದರೂ ಅಭಿನಯಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ