ನವದೆಹಲಿ: ಬಲ್ಗೇರಿಯಾದಲ್ಲಿ ಕಾಡು ಹಂದಿ ಬೇಟೆಯಾಡಿದ್ದರ ಕುರಿತು ಸೈಫ್ ಅಲಿ ಖಾನ್ ಗೆ ಇಂಟರ್ ಪೋಲ್ ನೋಟಿಸ್ ಜಾರಿ ಮಾಡಿದೆ.
ಬೇಟೆಯಾಡಿರುವುದರ ವಿಚಾರ ಕುರಿತು ಸೈಫ್ ಅಲಿ ಖಾನ್ ಅವರಿಂದ ಹೇಳಿಕೆ ಪಡೆಯುವಂತೆ ಬಲ್ಗೇರಿಯಾ ಸರ್ಕಾರ ಇಂಟರ್ ಪೋಲ್ ಗೆ ಸೂಚನೆ ನೀಡಿದೆ.
ಅನುಮತಿ ಹಾಗೂ ಪರವಾನಗಿ ಪಡೆದುಕೊಳ್ಳದೆ ಸೈಫ್ ಅಲಿ ಖಾನ್ ಅವರ ಏಜೆಂಟ್ ಕಾಡು ಹಂದಿ ಬೇಟೆಯನ್ನು ವ್ಯವಸ್ಥೆ ಮಾಡಿದ್ದರು ಹಾಗಾಗಿ ಏಜೆಂಟ್ ನನ್ನು ಬಲ್ಗೇರಿಯಾ ಪೊಲೀಸರು ಪ್ರಕರಣದಲ್ಲಿ ಸೇರಿಸಿದ್ದಾರೆ. ಪ್ರಕರಣದಲ್ಲಿ ಸೈಫ್ ಅಲಿ ಖಾನ್ ಸಾಕ್ಷಿಯಾಗಿದ್ದು ಒಂದು ತಿಂಗಳ ಹಿಂದೆ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ಬಲ್ಗೇರಿಯಾದಲ್ಲಿ ಬೇಟೆಯಾಡಲು ನಿಯಮಗಳಿದ್ದು, ಬೇಟೆಯ ಕಾನೂನಿನ ಪ್ರಕಾರ ಬೇಟೆಯಾಡುವವರು ಆ ದೇಶದ ಬೇಟೆಯಾಡುವ ಪರವಾನಗಿ ಹೊಂದಿರಬೇಕು ಅಥವಾ ಬಲ್ಗೇರಿಯಾ ದೇಶದ ಪರೀಕ್ಷೆಯನ್ನು ಪಾಸ್ ಮಾಡಿ ಪರವಾನಗಿಯನ್ನು ಪಡೆದಿರಬೇಕು.
ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪಡೆಯುವಂತೆ ಇಂಟರ್ ಪೋಲ್ ನಿಂದ ಬಾಂದ್ರಾ ಘಟಕದ ಕ್ರೈಂ ವಿಭಾಗಕ್ಕೆ ಸೂಚನೆ ಬಂದ ಬೆನ್ನಲ್ಲೇ ಪೊಲೀಸರು ಖಾನ್ ಅವರ ಉಪನಗರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಸಿಬಿಐ ಮೂಲಕ ಇಂಟರ್ ಪೋಲ್ ನಿಂದ ಕೆಲವು ದಾಖಲೆಗಳು ಬಂದಿತು ಅದನ್ನು ಖಾನ್ ಅವರಿಗೆ ಕಳಿಸಿಕೊಡಲಾಗಿದೆ ಹೇಳಿಕೆಯನ್ನು ಇನ್ನೂ ಪಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಾಡು ಪ್ರಾಣಿಗಳ ಬೇಟೆಯನ್ನು ನಿಷೇಧಿಸಲಾಗಿದೆ.