ಕಾರವಾರ: ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ರಲ್ಲಿ ಮೊದಲಿನಂತೆ ಎಲ್ಲ ಬಸ್ ಗಳ ಸಂಚಾರಕ್ಕೆ ಹಾಗೂ ಜಲ್ಲಿ, ಮರಳು ಸಾಗಾಟಕ್ಕೆ ಅನುಕೂಲ ಮಾಡಿಕೊಡುವಂತೆ ಜೊಯಿಡಾ ತಾಲೂಕಿನ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ಸಂಪೂರ್ಣ ಸಂಚಾರ ಬಂದಾಗಿತ್ತು. ಗುಡ್ಡ ಕುಸಿತವಾದ ಭಾಗವನ್ನು ಸ್ಥಳೀಯರೇ ತೆರವುಗೊಳಿಸಿ, ರಸ್ತೆ ನಿರ್ಮಾಣ ಮಾಡಿದ್ದು, ಇದೀಗ ತಾತ್ಕಾಲಿಕವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಸಣ್ಣ ವಾಹನಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಕಾರವಾರ ಹಾಗೂ ಜೊಯಿಡಾ ಸುತ್ತಲಿನ ಭಾಗದ ಜನರು ನಿತ್ಯ ಒಂದಲ್ಲ ಒಂದು ಕಾರಣದಿಂದಾಗಿ ಓಡಾಟ ಮಾಡುವುದರಿಂದ ಈ ಸಮಯದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಸ್ ಸಂಚಾರ ಕೂಡ ಮೊದಲಿನಂತೆ ಇರದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದನ್ನೂ ಓದಿ: ನಗರಸಭೆ ಕರ ವಸೂಲಾತಿಯ ಲಕ್ಷಾಂತರ ರೂ. ದುರುಪಯೋಗ- ಸಿಬ್ಬಂದಿ ಆಸ್ತಿ ಮುಟ್ಟುಗೋಲು ಹಾಕಲು ಮುಂದಾದ ಅಧಿಕಾರಿಗಳು
ಆದ್ದರಿಂದ ಈ ಮೊದಲಿನಂತೆ ಎಲ್ಲ ಬಸ್ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಗುಡ್ಡ ಕುಸಿತ ಭಾಗಗಳನ್ನು ಪರಿಶೀಲಿಸಿ ಸಣ್ಣ ಪುಟ್ಟ ತೊಂದರೆಗಳಿದ್ದಲ್ಲಿ ತಕ್ಷಣ ಸರಿಪಡಿಸಿ ಮರಳು, ಜಲ್ಲಿಗಳನ್ನು ಕೊಂಡೊಯ್ಯೊಲು ಅವಕಾಶ ಮಾಡಿಕೊಡಬೇಕು. ಕಾರವಾರ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಜೊಯಿಡಾ ಭಾಗದಿಂದ ಜಲ್ಲಿ ಹಾಗೂ ಎಂ ಸ್ಯಾಂಡ್ ನ್ನು ಪಡೆಯುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕೂಡಲೇ ಈ ಬಗ್ಗೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಸಿದ್ದಾರೆ. ಇದನ್ನೂ ಓದಿ: ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್
ಈ ವೇಳೆ ಗ್ರಾ.ಪಂ ಸದಸ್ಯ ಕೃಷ್ಣಾ ದೇಸಾಯಿ, ದಿಗಂಬರ ದೇಸಾಯಿ, ಪ್ರವೀಣ ನಾಯ್ಕ, ರತ್ನಾಕರ್ ದೇಸಾಯಿ, ಮಂಜುನಾಥ ಮುಕಾಶಿ, ಅನಂತ್ ಭಟ್, ರಾಮಚಂದ್ರ ಭಟ್ ಇನ್ನಿತರರು ಇದ್ದರು.