ಬೆಂಗಳೂರು: ಈ ಋತುವಿನ ರಣಜಿ ಟೂರ್ನಮೆಂಟ್ ನಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಿರುವ ಕರ್ನಾಟಕ ತಂಡ ಇಂದು 5ನೇ ಪಂದ್ಯ ಆಡಲಿದೆ.
ರಾಜ್ಕೋಟ್ನಲ್ಲಿ ಸೌರಾಷ್ಟ್ರ ತಂಡವನ್ನು ಕರ್ನಾಟಕ ಎದುರಿಸಲಿದೆ. ಈಗಾಗಲೇ ಕರ್ನಾಟಕ ತಂಡ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2 ಪಂದ್ಯವನ್ನು ಡ್ರಾ ಸಂಪಾದಿಸಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದು ನಾಕೌಟ್ ಹಂತಕ್ಕೇರುವ ಕನಸ್ಸಿನಲ್ಲಿ ಕರ್ನಾಟಕ ತಂಡ ಇದೆ.
ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ವಿವಾಹ ಹಿನ್ನೆಲೆ ಈ ಪಂದ್ಯದಿಂದ ದೂರ ಉಳಿದಿದ್ದಾರೆ. ಕರುಣ್ ಅನುಪಸ್ಥಿತಿಯಲ್ಲಿ ಶ್ರೇಯಸ್ ಗೋಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕ ತಂಡಕ್ಕೆ ಬ್ಯಾಟಿಂಗ್ ವಿಭಾಗಕ್ಕೆ ಕೆ.ವಿ ಸಿದ್ಧಾರ್ಥ್, ಆಲ್ ರೌಂಡರ್ ಪವನ್ ದೇಶಪಾಂಡೆ, ಆರ್. ಸಮರ್ಥ್, ದೇವದತ್ ಪಡಿಕ್ಕಲ್ ಬಲವಿದೆ. ಬೌಲಿಂಗ್ನಲ್ಲಿ ಕೌಶಿಕ್, ಅಭಿಮನ್ಯು ಮಿಥುನ್, ರೋನಿತ್ ಮೋರೆ ಉತ್ತಮ ಫಾರ್ಮ್ನಲ್ಲಿದ್ದು ಕರ್ನಾಟಕ ತಂಡ ಬಲಿಷ್ಠವಾಗಿದೆ.
ಕರ್ನಾಟಕ ಎದುರಾಳಿ ಸೌರಾಷ್ಟ್ರ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 1 ಪಂದ್ಯದಲ್ಲಿ ಸೋತಿದ್ದು, ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ವಿಶೇಷ ಎಂದರೆ ಸೌರಾಷ್ಟ್ರದ ವಿರುದ್ಧ ಆಡಿರುವ ಮೂರು ಪಂದ್ಯದಲ್ಲಿ ಕರ್ನಾಟಕ ಸೋತಿದ್ದು, ಗೆಲುವಿನ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.