ರಾಮನಗರ: ಜಿಲ್ಲೆಗೆ ನವ ಬೆಂಗಳೂರು ಮರುನಾಮಕರಣ ವಿಚಾರವಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಾರಂಭಿಕ ಹಂತದಲ್ಲಿ ಚರ್ಚೆಗಳು ನಡೆದಿದ್ದು, ರಾಮನಗರ ಜಿಲ್ಲೆಯ ಐದು ತಾಲೂಕುಗಳು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗಳೂರು ಮಾಡಬೇಕು ಎಂಬುದು ಸಚಿವರ ತಲೆಯಲ್ಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯಾಗಿ ಘೋಷಣೆಯಾಗಿ 13 ವರ್ಷಗಳೇ ಕಳೆದಿವೆ. ಆದರೆ ಅಭಿವೃದ್ದಿ ಮಾತ್ರ ಶೂನ್ಯವಾಗಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿಕೆ ಶಿವಕುಮಾರ್ ಜನರಿಗೆ ಕಿವಿಯ ಮೇಲೆ ಹೂ ಇಡುವಂತಹ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಘೋಷಣೆಗೆ ಪ್ರಮುಖ ಪಾತ್ರ ವಹಿಸಿದ್ದು ಸಿಎಂ ಯಡಿಯೂರಪ್ಪ ಎಂದು ತಿಳಿಸಿದರು.
ನವ ಬೆಂಗಳೂರು ವಿಚಾರವಾಗಿ ಜನರಲ್ಲಿ ಗೊಂದಲ ಮೂಡಿಸುವ ಅವಶ್ಯಕತೆ ಇಲ್ಲ. ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದು, ನಂತರ ರಾಮನಗರ ಜಿಲ್ಲೆಯಾಗಿದೆ. ರಾಮನಗರ ಕೂಗಳತೆ ದೂರದಲ್ಲಿರುವ ಜಿಲ್ಲೆಯಾಗಿದ್ದು 5 ಟೌನ್ ಶಿಫ್ ಗಳು ಬರ್ತಿವೆ. ರಾಮನಗರ ಹೆಸರನ್ನು ಬದಲಾವಣೆ ಮಾಡಿ ನವ ಬೆಂಗಳೂರು ಮಾಡುವ ಯೋಚನೆ ಇಲ್ಲ ಅಂತ ಹೇಳಿದರು.
ಆದರೆ ನ್ಯೂ ಡೆಲ್ಲಿ, ನ್ಯೂ ಮುಂಬೈ, ನ್ಯೂ ಮಡ್ರಾಸ್ ರೀತಿ ರಾಮನಗರದ ಹೆಸರಿಗೆ ತೊಂದರೆಯಾಗದ ರೀತಿ ಕಾಳಜಿ ವಹಿಸಲಾಗಿದೆ. ಡಿಸಿಎಂ ಅಶ್ವಥ್ ನಾರಾಯಣ್ ರಿಂದ ಮಾರ್ಗಸೂಚಿ ಮಾಡಿ ಪ್ಲಾನ್ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ ಮುಖಂಡರಿಂದಲೂ ಸಹ ಸಲಹೆ ಪಡೆಯಲಾಗುತ್ತಿದೆ. ಯಾವ ರೀತಿ ಮಾಡಬೇಕು ಎಂಬ ಚರ್ಚೆಯಾಗುತ್ತಿದೆ ಎಂದರು.
ಅಂತರಾಷ್ಟ್ರೀಯವಾಗಿ ರಾಮನಗರ ಹೆಸರು ಮಾಡುವುದರ ಬಗ್ಗೆ ಚರ್ಚೆಯಾಗುತ್ತಿದ್ದು, ಸಿಎಂ ಹಾಗೂ ಡಿಸಿಎಂ ನಿರ್ಧಾರ ತೆಗೆದುಕೊಂಡಿದ್ದು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನವ ಬೆಂಗಳೂರು ಬಗ್ಗೆ ಚಿಂತನೆ ನಡೆದಿದ್ದು ಜಿಲ್ಲೆ ಅಭಿವೃದ್ಧಿಯ ದೃಷ್ಟಿಯಿಂದ ನವ ಬೆಂಗಳೂರು ಮಾಡಬೇಕೆಂಬ ಚರ್ಚೆ ಆಗುತ್ತಿದ್ದು, ಆಗುತ್ತೆ ಎಂದು ಅವರು ತಿಳಿಸಿದ್ರು.