-ರಾಮಲಿಂಗಾರೆಡ್ಡಿ ಹೊಸ ಬಾಂಬ್
ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧ ಕಾಂಗ್ರೆಸ್ ಇಂದು ಹೊಸ ಬಾಂಬ್ ಸಿಡಿಸಿದೆ. ಬಿಟ್ ಕಾಯಿನ್ ಹಗರಣದಲ್ಲಿ ಆಡಳಿತ ಪಕ್ಷದ ಪ್ರಭಾವಿಯೊಬ್ಬರಿದ್ದಾರೆ. ಮತ್ತೊಬ್ಬ ಪ್ರಭಾವಿಯ ಪುತ್ರರು ಕೂಡ ಭಾಗಿ ಆಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.
ಈ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಯೊಬ್ಬರ ಮಗ ಇದ್ದಾನೆ ಅನ್ನೋ ಮಾಹಿತಿ ಇದೆ. ತನಿಖೆ ಆದಾಗ ಎಲ್ಲಾ ವಿಚಾರ ಗೊತ್ತಾಗಲಿದೆ. ಬಿಟ್ ಕಾಯಿನ್ ಹಗರಣ ಬಗ್ಗೆ ಇಡಿಗೆ ತನಿಖೆಗೆ ಒಪ್ಪಿಸಲಾಗಿದೆ ಅಂತಿದ್ದಾರೆ. ಯಾವಾಗ ಇಡಿ ತನಿಖೆಗೆ ಒಳಪಡಿಸಲಾಯಿತು? ಈ ಬಗ್ಗೆ ಸದನದಲ್ಲೂ ಸಹ ಸರ್ಕಾರ ಏನೂ ಹೇಳಿರಲಿಲ್ಲ. ಆದರೆ ಹಗರಣದ ಬಗ್ಗೆ ಪ್ರಧಾನಿ ಕಚೇರಿಯಿಂದ ಪತ್ರ ಬಂದಿರೋದಾಗಿ ತಿಳಿದುಬಂದಿದೆ. ಬಿಟ್ ಕಾಯಿನ್ ಹಗರಣ ರಾಜ್ಯ ಸರ್ಕಾರಕ್ಕೆ ಕಂಟಕ ಆಗಲಿದೆ ಎಂದು ರಾಮಲಿಂಗಾರೆಡ್ಡಿ ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!
ಆದರೆ ಯಾರ್ಯಾರಿದ್ದಾರೆ ಹೇಳಿ ಎಂದಾಗ ನ್ಯಾಯಾಂಗ ತನಿಖೆ ನಡೆಯಲಿ ಎಂದು ರಾಮಲಿಂಗಾರೆಡ್ಡಿ ಸುಮ್ಮನಾಗಿದ್ದಾರೆ. ಬಳಿಕ ಸಿದ್ದರಾಮಯ್ಯರ ಮೇಲೆ ಬಿಜೆಪಿ ಆರೋಪದ ಬಗ್ಗೆ ಮಾತನಾಡಿದ ಅವರು, ವಿನಾಕಾರಣ ಸಿದ್ದರಾಮಯ್ಯನವರ ಮೇಲೆ ಬಿಜೆಪಿ ಅವರು ಆರೋಪ ಮಾಡುತ್ತಿದ್ದಾರೆ. ದಲಿತರು ಹೊಟ್ಟೆಪಾಡಿಗೆ ಹೋಗಿದ್ದಾರೆ ಅಂತಾ ಸಿದ್ದರಾಮಯ್ಯ ಎಲ್ಲೂ ಹೇಳಿಲ್ಲ. ಬಿಜೆಪಿ ಅವರು ಸುಳ್ಳು ಹೇಳಿಕೊಂಡು, ವಿಷಯಾಂತರ ಮಾಡಿಕೊಂಡು ಬರುತ್ತಿದ್ದಾರೆ. ವಿಷಯ ತಿರುಚುವುದರಲ್ಲಿ ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಸುಳ್ಳು ಹೇಳುವುದು ಬಿಜೆಪಿ ನಾಯಕರಿಗೆ ಕರಗತ, ಹುಟ್ಟುತ್ತಲೇ ಸುಳ್ಳು ಹೇಳುವುದು ಕಲಿತುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿಕಾರಿದರು.
ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇದನ್ನೂ ಓದಿ: ಬಿಟ್ ಕಾಯಿನ್ ದಂಧೆಯಲ್ಲಿ ಪ್ರಭಾವಿಗಳಿದ್ದಾರೆ: ಸಿದ್ದರಾಮಯ್ಯ