– ಅಯೋಧ್ಯೆಯಲ್ಲಿ ಡಿ. 10ರವರೆಗೂ ನಿಷೇಧಾಜ್ಞೆ
ಅಯೋಧ್ಯೆ: ದೇಶದ ಅತಿದೊಡ್ಡ, ದೀರ್ಘಕಾಲದ ಕಾನೂನು ಸಮರವಾಗಿರೋ ಅಯೋಧ್ಯೆಯ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ಭೂವಿವಾದದ ತೀರ್ಪನ್ನು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಶೀಘ್ರವೇ ಪ್ರಕಟಿಸುವ ಸಾಧ್ಯತೆ ದಟ್ಟವಾಗುತ್ತಿದೆ.
ಡಿಸೆಂಬರ್ 10ರವೆಗೆ ಅಯೋಧ್ಯಾ ಜಿಲ್ಲಾ ನ್ಯಾಯಾಲಯ ನಿಷೇಧಾಜ್ಞೆ ಆದೇಶಿಸಿದೆ. ಸುಮಾರು 35 ದಿನಗಳಿಂದ ಪ್ರತಿದಿನ ವಿಚಾರಣೆ ನಡೆಸಿರುವ ಕೋರ್ಟ್ ಅಕ್ಟೋಬರ್ 16ರ ಒಳಗೆ ವಾದ-ಪ್ರತಿವಾದ ಮುಗಿಸಬೇಕು. ಯಾವುದೇ ಕಾರಣಕ್ಕೂ ಡೆಡ್ಲೈನ್ ವಿಸ್ತರಣೆ ಇಲ್ಲ ಎಂದು ಹೇಳಿತ್ತು. ಹೀಗಾಗಿ, ವಾದಿ-ಪ್ರತಿವಾದಿಗಳ ಅಂತಿಮ ವಾದಗಳು ಅಂತ್ಯಕ್ಕೆ ಬಂದಿವೆ. ಈ ಮಧ್ಯೆ ಹಿಂದೂಗಳಿಗೆ ಗಿಫ್ಟ್ ಆಗಿ ಬಾಬ್ರಿ ಮಸೀದಿ ವಿವಾದಿತ ಜಾಗ ಬಿಟ್ಟುಕೊಡುವುದಾಗಿ ಕೆಲವು ಮುಸ್ಲಿಂ ಸಂಘಟನೆಗಳು ಹೇಳಿವೆ.
ಈ ಹಿಂದೆ ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟಿನ ಪಂಚ ನ್ಯಾಯಾಧೀಶರ ಪೀಠವು ಅಕ್ಟೋಬರ್ 18ರಂದು ಕೊನೆಯ ವಿಚಾರಣೆ ಹಾಕಿಕೊಂಡಿತ್ತು. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪ್ರಸ್ತಾಪಿಸಿ, ಅಕ್ಟೋಬರ್ 18ರೊಳಗೆ ಇದನ್ನು ಮುಕ್ತಾಯಗೊಳಿಸಲು ಜಂಟಿ ಪ್ರಯತ್ನ ಮಾಡೋಣ ಎಂದು ತಿಳಿಸಿದ್ದರು. ನ್ಯಾಯಮೂರ್ತಿ ಗೊಗೊಯ್ ಅವರು ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಆಗಲಿದ್ದಾರೆ. ಹೀಗಾಗಿ ಗೊಗೋಯ್ ಅವರು ಅ.18ರ ಗಡುವು ಹಾಕಿಕೊಂಡಿದ್ದರು.
ಸುಪ್ರೀಂಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಯು ಸೌಹಾರ್ದಯುತ ನಿರ್ಣಯಕ್ಕೆ ಬರಲು ಎರಡೂ ಪಕ್ಷಗಳ ಒಡುವೆ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ದಶಕಗಳಿಂದ ಬಾಕಿ ಉಳಿದಿರುವ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಲು ಪಂಚ ನ್ಯಾಯಾಧೀಶರ ಪೀಠ ಆಗಸ್ಟ್ ನಿಂದ ಪ್ರತಿನಿತ್ಯ ವಿಚಾರಣೆ ನಡೆಸಲು ಪ್ರಾರಂಭಿಸಿದೆ.