– ಕೋಲಾರದಲ್ಲಿ ಗುಡುಗು, ಗಾಳಿ ಸಹಿತ ಭರ್ಜರಿ ಮಳೆ
ಚಿಕ್ಕಬಳ್ಳಾಪುರ/ಕೋಲಾರ: ಚಿಕ್ಕಬಳ್ಳಾಪುರ ತಾಲೂಕಿನ ಗಂಗರೆಕಾಲುವೆ, ಗೊಳ್ಳು, ಕತ್ರಿಗುಪ್ಪೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದು ಆಲಿಕಲ್ಲು ಸಹಿತ ಮಳೆಯಾಗಿದೆ.
ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಇಂದು ಮಳೆ ಆಗಿದೆ. ಇನ್ನೂ ದಿಢೀರನೆ ಸುರಿದ ಆಲಿಕಲ್ಲು ಮಳೆಗೆ ದ್ರಾಕ್ಷಿ ಹಾಗೂ ತರಕಾರಿ, ಹೂ-ಹಣ್ಣಿನ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ.
ಹಳ್ಳಿಗಳಲ್ಲಿ ಆಲಿಕಲ್ಲು ಮಳೆ ಆಗಿದೆ ಎಂದು ತಿಳಿದ ನಗರದ ಜನತೆ ನಗರದಲ್ಲಿ ಮಳೆನಾ ಇಲ್ವಲ್ವಾ. ಇಷ್ಟೊಂದು ಆಲಿಕಲ್ಲು ಮಳೆನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಮಳೆಯಾಗಿದೆ.
ಇತ್ತ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆರಾಯನ ಸಿಂಚನವಾಗಿದೆ. ಕೋಲಾರ ಹೊರಹೊಲಯದಲ್ಲಿ ಭರ್ಜರಿ ಮಳೆ ಆಗಿದೆ. 20 ನಿಮಿಷದಿಂದ ಭರ್ಜರಿ ಮಳೆ ಸುರಿಯುತ್ತಿದ್ದು, ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ದಿಢೀರನೆ ಆರಂಭವಾದ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಸದ್ಯ ಜನರಿಗೆ ಮಳೆಯಿಂದ ಮತ್ತಷ್ಟು ಕೊರೊನಾ ವೈರಸ್ನ ಆತಂಕ ಹೆಚ್ಚಾಗಿದೆ.