ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ. ಆದರೆ ಅವರು ರಾಜಕೀಯಕ್ಕೆ ಯೋಗ್ಯವಾದ ವ್ಯಕ್ತಿಯಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಹುಲ್ ಗಾಂಧಿಯವರನ್ನು ಸೋಮವಾರ ಟೀಕಿಸಿದ್ದಾರೆ.
ಕಾಂಗ್ರೆಸ್ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ ಆಜಾದ್, ನಾನು ಪಕ್ಷವನ್ನು ತೊರೆದಿಲ್ಲ. ಕಾಂಗ್ರೆಸ್ನ ಹಲವು ಸಭೆಗಳು ನಡೆದಿವೆ. ಆದರೆ ನನ್ನ ಒಂದೇ ಒಂದು ಸಲಹೆಯನ್ನೂ ಅವರು ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಸೋನಿಯಾ ಗಾಂಧಿ ಮತ್ತು ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ನನಗೆ ಅಪಾರ ಗೌರವವಿದೆ. ರಾಹುಲ್ ಗಾಂಧಿ ಅವರನ್ನು ಯಶಸ್ವಿ ನಾಯಕರನ್ನಾಗಿ ಮಾಡಲು ಕಾಂಗ್ರೆಸ್ನ ಎಲ್ಲಾ ನಾಯಕರೂ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರೇ ಆಸಕ್ತಿ ತೋರಿಸಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಆರು ಕಡೆ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ರ್ಯಾಲಿ: ಬೊಮ್ಮಾಯಿ
ಸೋನಿಯಾ ಗಾಂಧಿ ಅವರ ಬಗ್ಗೆ ನನಗೆ 30 ವರ್ಷಗಳ ಹಿಂದೆ ಇದ್ದಷ್ಟೇ ಇಂದಿಗೂ ಗೌರವ ಇದೆ. ಇಂದಿರಾಗಾಂಧಿ ಕುಟುಂಬ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರ ಮೇಲೂ ಗೌರವ ಇದೆ. ನಾನು ವೈಯಕ್ತಿಕವಾಗಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಆಜಾದ್ ಶುಭ ಹಾರೈಸಿದರು. ಇದನ್ನೂ ಓದಿ: ಟ್ರೂ ಕಾಲರ್ ವಿರುದ್ಧ ಅರ್ಜಿ – ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್