– ಪಬ್ಲಿಕ್ ಟಿವಿ ವರದಿ ಉಲ್ಲೇಖಿಸಿ ತನಿಖೆಗೆ ಸಚಿವರಿಂದ ಸೂಚನೆ
ಬೆಂಗಳೂರು: ನರ್ಸಿಂಗ್ ಪರೀಕ್ಷೆಯಲ್ಲಿ ಪರೀಕ್ಷಾ ಮೇಲ್ವಿಚಾರಕಿಯೇ ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಸಹಾಯ ಮಾಡಿದ್ದ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಪರೀಕ್ಷಾ ಮೇಲ್ವಿಚಾರಕಿಯನ್ನು ಅಮಾನತುಗೊಳಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಶನಿವಾರ ವರದಿ ಪ್ರಸಾರ ಮಾಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಈ ಸಂಬಂಧ ತನಿಖೆ ನಡೆಸಲು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿದ್ದರು. ನಿರ್ದೇಶಕರು ಪಬ್ಲಿಕ್ ಟಿವಿ ವರದಿಯನ್ನು ಉಲ್ಲೇಖಿಸಿ ಸರೋಜಮ್ಮ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ನಾಲ್ವರು ಸದಸ್ಯರ ಸಮಿತಿ ರಚಿಸಿ ಮೂರು ದಿನದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಸರೋಜಮ್ಮ, ದುಡ್ಡು ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲೇ ಪುಸ್ತಕ ಮತ್ತು ಉತ್ತರ ಪತ್ರಿಕೆ ಕೊಟ್ಟು ಕಾಪಿ ಮಾಡಿಸಿದ್ದರು. ನೌಕರಿಯಲ್ಲಿ ಇರೋರು ಕೆಲವೊಮ್ಮೆ ಪ್ರಮೋಶನ್, ಸರ್ಟಿಪಿಕೇಟ್ಗಾಗಿ ಸರ್ಕಾರಿ ಶ್ರುಶೂಷಕರ ಕಾಲೇಜಿನಲ್ಲಿ ಬಿಎಸ್ಸಿ ಎಕ್ಸಾಂ ಬರೆಯುತ್ತಾರೆ. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡ ಕೆಲವರು ಇದರಿಂದ ದುಡ್ಡು ಮಾಡಲು ಹೊರಟ್ಟಿದ್ದಾರೆ.
ಈ ಹಿಂದೆ ಈ ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿರೋದಕ್ಕೆ, ಪರೀಕ್ಷಾ ಹಾಲ್ನಲ್ಲಿ ವೆಬ್ ಸ್ಕ್ರೀನಿಂಗ್ ಹಾಕಲಾಗಿತ್ತು. ಅದನ್ನು ಕೂಡ ಆಫ್ ಮಾಡಿ ಈ ಕಳ್ಳಾಟಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ. ಕ್ಯಾಮೆರಾ ಕಣ್ಣು ಗಮನಿಸುತ್ತಿದೆ ಎಂದು ಗೊತ್ತಿದ್ದರೂ ಖುಲ್ಲಾಂ ಖುಲ್ಲಾಂ ಪುಸ್ತಕಗಳನ್ನು ಎಕ್ಸಾಂ ಹಾಲ್ನಲ್ಲಿ ಹಂಚೋದರ ಹಿಂದೆ ದೊಡ್ಡವರ ಕೃಪಕಟಾಕ್ಷ ಇದೆ. ಇದರಲ್ಲಿ ಎಲ್ಲರಿಗೂ ಪಾಲು ಇದೆ ಎಂಬ ಆರೋಪ ಕೇಳಿ ಬಂದಿತ್ತು.



