ಬೆಂಗಳೂರು: ಆಕೆಯದ್ದು ಅಕ್ಷರಶಃ ಒಂದು ಹೋರಾಟದ ಜೀವನ. ವಿಧಿಯಾಟಕ್ಕೆ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರೂ ಆತ್ಮವಿಶ್ವಾಸ ಮಾತ್ರ ಕುಗ್ಗಲಿಲ್ಲ. ವೀಲ್ಚೇರ್ (Wheelchair) ಮೇಲೆ ಕುಳಿತೇ ಜೀವನದ ಹಾದಿ ಸವೆಸುತ್ತಿರುವ ಈಕೆ, ಏಕಾಂಗಿಯಾಗಿ ಸವಾಲುಗಳನ್ನು ಎದುರಿಸುತ್ತಿರುವ ಅಪ್ರತಿಮ ಛಲಗಾರ್ತಿ. ಬೆನ್ನುಬಿದ್ದ ಕಷ್ಟಗಳ ನಡುವೆಯೂ ಈಕೆಯ ಕಣ್ಣಲ್ಲಿ ಬಿಲ್ಲುಗಾರಿಕೆಯ (Archery) ಸಾಧನೆಯ ಕನಸಿತ್ತು. ಆದರೆ ಬಡತನದ ಬೇಗೆಯಲ್ಲಿ ಬೆಂದಿದ್ದ ಆಕೆಗೆ ಅತ್ಯಂತ ದುಬಾರಿ ಬೆಲೆಯ ಆರ್ಚರಿ ಕಿಟ್ ಖರೀದಿಸುವುದು ಅಸಾಧ್ಯದ ಮಾತಾಗಿತ್ತು. ಆರ್ಥಿಕ ಸಂಕಷ್ಟ ಆಕೆಯ ಗುರಿ ತಲುಪಲು ಅಡ್ಡಿಯಾಗಿತ್ತು.
ಈ ಪ್ರತಿಭಾವಂತೆಯ ಅದಮ್ಯ ಕನಸನ್ನು ಗುರುತಿಸಿದ ‘ಪಬ್ಲಿಕ್ ಟಿವಿ’ ಆಕೆಗೆ ಹೆಗಲಾಗಿ ನಿಲ್ಲುವ ಭರವಸೆ ನೀಡಿತ್ತು. ಈಗ ಆ ಭರವಸೆ ಮಾತಿನಂತೆಯೇ ಈಡೇರಿದೆ. ಛಲಗಾರ್ತಿಯ ಕೈಗೆ ಬಿಲ್ಲು-ಬಾಣಗಳನ್ನು ನೀಡುವ ಮೂಲಕ ಆಕೆಯ ಸಾಧನೆಯ ಹಾದಿಗೆ ಪಬ್ಲಿಕ್ ಟಿವಿ ಈಗ ಮುನ್ನುಡಿ ಬರೆದಿದೆ.
ಮೂಲತಃ ಕೊಪ್ಪಳದವರಾದ ಜಯಶ್ರೀ (Jayashree) ಅವರ ಬದುಕು ಸುಗಮವಾಗಿಯೇ ಸಾಗುತ್ತಿತ್ತು. ಆದರೆ ಹೆರಿಗೆಯ ಸಂದರ್ಭದಲ್ಲಿ ನೀಡಿದ ಅನಸ್ತೇಶಿಯಾ ಎಂಬ ವಿಧಿಯ ಕ್ರೂರ ಆಟಕ್ಕೆ ಅವರು ತಮ್ಮ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡರು. ಸೊಂಟದ ಕೆಳಭಾಗದ ಸ್ಪರ್ಶಜ್ಞಾನವೇ ಮರೆಯಾಗಿ, ವೀಲ್ಚೇರ್ ಬದುಕಿನ ಭಾಗವಾಯಿತು. ಇದನ್ನೂ ಓದಿ: ವ್ಹೀಲ್ಚೇರ್ನಲ್ಲಿ ರೊಟ್ಟಿ ಮಾರುತ್ತಿರುವ ಜಯಶ್ರೀಗೆ ನಾರಿ ನಾರಾಯಣಿ ಗೌರವ

ಆರಂಭದಲ್ಲಿ ಕಂಗೆಟ್ಟರೂ ದೃತಿಗೆಡದ ಜಯಶ್ರೀ, ಏಕಾಂಗಿಯಾಗಿಯೇ ಬದುಕಿನ ರಣರಂಗದಲ್ಲಿ ಸೆಣಸಾಟಕ್ಕಿಳಿದರು. ಸ್ವತಃ ರೊಟ್ಟಿ ಉದ್ಯಮವನ್ನು ಪ್ರಾರಂಭಿಸಿ, ಅಬಲೆ ಎನಿಸಿಕೊಳ್ಳದೆ ಸಬಲೆಯಾಗಿ ನಿಂತರು. ಇವರ ಈ ಅದಮ್ಯ ಸಾಹಸವನ್ನು ಗುರುತಿಸಿದ ಪಬ್ಲಿಕ್ ಟಿವಿ (PUBLiC TV) ಇತ್ತೀಚೆಗೆ ಇವರಿಗೆ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ವೀಲ್ಚೇರ್ನಲ್ಲಿ ಕುಳಿತೇ ಬಿಲ್ಲುಗಾರಿಕೆಯಲ್ಲಿ (Archery) ಸಾಧನೆ ಮಾಡಬೇಕೆಂಬ ಅತೀವ ಆಸೆ ಹೊಂದಿದ್ದ ಜಯಶ್ರೀ ಆ ಹಂಬಲವನ್ನು ನಾರಿನಾರಾಯಣಿ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಆದರೆ ದುಬಾರಿ ಬೆಲೆಯ ಆರ್ಚರಿ ಕಿಟ್ ಕೊಳ್ಳುವ ಶಕ್ತಿ ಅವರ ಬಳಿ ಇರಲಿಲ್ಲ. ಅಂದು ಆ ವೇದಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪಬ್ಲಿಕ್ ಟಿವಿ ಈಗ ತನ್ನ ‘ಒಂದೊಳ್ಳೆ ಕೆಲಸ’ ಕಾರ್ಯಕ್ರಮದ ಮೂಲಕ ಜಯಶ್ರೀ ಅವರ ಕೈಗೆ ಅತ್ಯಾಧುನಿಕ ಆರ್ಚರಿ ಕಿಟ್ ತಲುಪಿಸಿದೆ. ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟಿರುವ ಈ ಛಲಗಾರ್ತಿಯ ಕನಸಿನ ಗುರಿಗೆ ಪಬ್ಲಿಕ್ ಟಿವಿ ಈಗ ಬಲವಾದ ರೆಕ್ಕೆಗಳನ್ನು ನೀಡಿದೆ.
ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಸುಮಾರು 4 ಲಕ್ಷ ರೂ. ಮೌಲ್ಯದ ಆರ್ಚರಿ ಕಿಟ್ ಅನ್ನು ಜಯಶ್ರೀ ಅವರಿಗೆ ನೀಡಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು,ʻʻಯಾವುದೇ ಕೆಲಸಕ್ಕೆ ಮೊದಲು ಮನಸ್ಸು ಬರಬೇಕು. ಅವರ ಸಂಕಲ್ಪಕ್ಕೆ ನನ್ನ ಮೆಚ್ಚುಗೆಯಿದೆ. ಕ್ರೀಡಾಲೋಕದಲ್ಲಿ ಬೇರೆ ಬೇರೆ ರೀತಿ ನೋಡಿದ್ದೇವೆ. ಭವಿಷ್ಯದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ನಮ್ಮಿಂದ ಮುಂದೆ ಏನು ಸಹಾಯವಾಗಬೇಕೋ ಅದನ್ನು ನಾನು ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಆರ್ಚರಿ ಪಡೆದ ಬಳಿಕ ಮಾತನಾಡಿದ ಜಯಶ್ರೀ, ʻʻನನಗೆ ಇವತ್ತು ಬಹಳ ಸಂತಸವಾಗುತ್ತಿದೆ. ಕೈಗಳು ಇಲ್ಲದಿದ್ದರೂ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ಶೀತಲ್ ದೇವಿ ನನಗೆ ಸ್ಪೂರ್ತಿ. ಶೀತಲ್ ದೇವಿ ಅವರು ಎರಡೂ ಕೈಗಳು ಇಲ್ಲದೇ ಇದ್ದರೂ ಸಾಧ್ಯವಾಗಿದೆ ಎನ್ನುವಾಗ ಎಡು ಕೈಗಳಿರುವ ನಾನು ಯಾಕೆ ಪ್ರಯತ್ನಿಸಬಾರದು ಎಂದು ಭಾವಿಸಿದೆ. ಈ ಕಾರಣಕ್ಕೆ ನಾನು ಆರ್ಚರಿಯಲ್ಲಿ ಅಭ್ಯಾಸ ಮಾಡಬೇಕೆಂದು ಕನಸು ಕಂಡೆ. ರಂಗನಾಥ್ ಸರ್ ಅವರ ಬಳಿಕ ಸಮಸ್ಯೆ ಹೇಳಿದರೆ ಖಂಡಿತ ಪರಿಹಾರ ಮಾಡುತ್ತಾರೆ ಎಂಬ ವಿಶ್ವಾಸವಿತ್ತು. ಈ ಕಾರಣಕ್ಕೆ ನಾನು ನಾರಿ ನಾರಾಯಣಿ ವೇದಿಕೆಯಲ್ಲಿ ಆರ್ಚರಿ ಬೇಕೆಂದು ಮನವಿ ಮಾಡಿದ್ದೆ. ಅಂದು ಕಂಡ ಕನಸು ಈಗ ನನಸಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಅನೇಕ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಪಬ್ಲಿಕ್ ಟಿವಿ ನಿರಂತರವಾಗಿ ಅವರ ಕನಸಿನ ಗುರಿ ತಲುಪಲು ಪ್ರೋತ್ಸಾಹ ನೀಡುತ್ತಿದೆ. ಅನೇಕರು ಈಗಾಗಲೇ ಸಾಧನೆಯ ಶಿಖರವನ್ನು ಏರಿದ್ದಾರೆ. ಅವರ ಸಾಧನೆ ಕಂಡು ಕರುನಾಡು ಹರ್ಷಿಸಿದೆ. ಇದೇ ಹಾದಿಯಲ್ಲಿರುವ ಛಲಗಾರ್ತಿ ಜಯಶ್ರೀ ಅವರು ಕೂಡ ಶ್ರೇಷ್ಠ ಕ್ರೀಡಾಪಟುವಾಗಿ ಹೊರಹೊಮ್ಮಲಿ ಎಂಬುದು ನಮ್ಮ ಹಾರೈಕೆ. ಬೆನ್ನುಬಿದ್ದ ವಿಧಿಯಾಟವನ್ನು ಮೆಟ್ಟಿ ನಿಂತು, ಬಿಲ್ಲುಗಾರಿಕೆಯಲ್ಲಿ ಮಿಂಚುವ ಮೂಲಕ ಅವರು ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತವೇ ಹೆಮ್ಮೆಪಡುವಂತಹ ಸಾಧನೆ ಮಾಡಲಿ ಎಂದು ನಾವು ಆಶಿಸುತ್ತೇವೆ.
