ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿಯ ಬೆಳಕು (PBLiC TV Belaku) ಕಾರ್ಯಕ್ರಮದ ಮತ್ತೊಂದು ಇಂಪ್ಯಾಕ್ಟ್ ಆಗಿದೆ. ಬಡ ಇಂಜಿನಿಯರಿಂಗ್ ವಿದ್ಯಾರ್ಥಿನಿ ಭವ್ಯ ಅವರಿಗೆ ಶಿಡ್ಲಘಟ್ಟ ಶಾಸಕ ರವಿಕುಮಾರ್ ನೆರವು ನೀಡಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವರಸಂದ್ರ ಗ್ರಾಮದ ಬಡ ಕುಟುಂಬದ ಹೆಣ್ಣು ಮಗಳು ಭವ್ಯಗೆ ಬೆಂಗಳೂರಿನ ಪ್ರತಿಷ್ಠಿತ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಶುಲ್ಕ ಕಟ್ಟಲು ಕಷ್ಟವಾಗಿತ್ತು. ಅಪ್ಪ-ಅಮ್ಮನ ಬಳಿ ಹಣ ಕೇಳಿದರೆ ಓದೋದೇ ಸಾಕು ಮನೆಗೆ ಬಂದುಬಿಡು ಮದುವೆ ಮಾಡ್ತೀವಿ ಅಂದಿದ್ದರು. ದಿಕ್ಕು ತೋಚದ ಭವ್ಯಾ ಸೀದಾ ಪಬ್ಲಿಕ್ ಟಿವಿ ಕಚೇರಿಗೆ ಬಂದು ಸಂಸ್ಥೆಯ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ (HR Ranganath) ಅವರಿಗೆ ಪತ್ರ ಬರೆದಿದ್ದಳು.
ನವೆಂಬರ್ 17ರಂದು ಪ್ರಸಾರಗೊಂಡ ಬೆಳಕು ಕಾರ್ಯಕ್ರಮವನ್ನು ವೀಕ್ಷಿಸಿದ ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್ ಅವರು ವಿದ್ಯಾರ್ಥಿನಿಯ ಎಂಜಿನಿಯರಿಂಗ್ ಓದುವ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅಲ್ಲದೆ 2ನೇ ವರ್ಷದ ಕಾಲೇಜು ಶುಲ್ಕ 1 ಲಕ್ಷದ 27 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ. ಶಾಸಕರ ನೆರವು ಸಿಕ್ಕಿದ್ದರಿಂದ ಪಬ್ಲಿಕ್ ಟಿವಿಗೆ ವಿದ್ಯಾರ್ಥಿನಿ ಭವ್ಯಾ ಹಾಗೂ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.