ಬೆಂಗಳೂರು: ಹುಟ್ಟು ಅಂಗವಿಕಲರಾದ್ರು ಛಲ ಅನ್ನೋದಿದ್ರೆ ಏನು ಬೇಕಾದರೂ ಸಾಧಿಸಬಹದು ಎಂಬುದನ್ನು ಇವತ್ತಿನ ನಮ್ಮ ಪಬ್ಲಿಕ್ ಹೀರೋ ತೋರಿಸಿಕೊಟ್ಟಿದ್ದಾರೆ. 70 ವರ್ಷ ದಾಟಿದರೂ ಇವರ ಉತ್ಸಾಹದ ಚಿಲುಮೆ ಕಡಿಮೆಯಾಗಲಿಲ್ಲ. ಸ್ವಾವಲಂಬಿ ಬದಕನ್ನು ನಡೆಸುವ ಮೂಲಕ ಹಲವರಿಗೆ ಇವರು ಮಾದರಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊಸ ನಿಜಗಲ್ ಗ್ರಾಮದ ನಿವಾಸಿ ನಾಗರಾಜು ಬಡತನದಲ್ಲಿ ಬೆಳೆದ್ರೂ ಎಸ್ಎಸ್ಎಲ್ಸಿ ಪಾಸಾಗಿದ್ದು, 1965ರಲ್ಲಿ ಅಂಗವಿಕಲ ಕೋಟಾದಡಿ ಸರ್ಕಾರಿ ಕೆಲಸಕ್ಕೆ ಸೇರಿದ್ರು. ಆದರೆ ಕೆಲ ದಿನಗಳಲ್ಲಿ ರಾಜೀನಾಮೆ ನೀಡಿ ಸಿವಿಲ್ ಕಂಟ್ರಾಕ್ಟರ್ ಆಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸರ್ಕಾರಿ ಕಟ್ಟಡ ಕಾಮಗಾರಿಗಳನ್ನ ನಡೆಸಿದ್ರು.
ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಿರಿಕಿರಿ ತಾಳದೆ ಕಂಟ್ರಾಕ್ಟರ್ ಕೆಲಸಕ್ಕೂ ಗುಡ್ ಬೈ ಹೇಳಿದ್ದಾರೆ. ಆಮೇಲೆ ಖಾಸಗಿ ಕಂಟ್ರಾಕ್ಟರ್ ಆಗಿ ಸಣ್ಣಪುಟ್ಟ ಕೆಲಸ ಮಾಡಿದ್ದಾರೆ. ಜೊತೆಗೆ ತಮ್ಮ ಜಮೀನಿನಲ್ಲಿ ರೈತನಾಗಿ ದುಡಿಯುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆ, ಇಟ್ಟಿಗೆ ತಯಾರಿಕಾ ಘಟಕಗಳನ್ನೂ ಹೊಂದಿದ್ದಾರೆ. ಬರುವ ಆದಾಯದಲ್ಲಿ ದೇವಸ್ಥಾನ, ಗ್ರಾಮಗಳ ಅಭಿವೃದ್ಧಿಗೆ ದೇಣಿಗೆ, ಗ್ರಾಮಕ್ಕೆ ಉಚಿತ ನೀರಿನ ಸರಬರಾಜು ಮಾಡ್ತಿದ್ದಾರೆ. ಒಟ್ಟಾರೆ ದಿವ್ಯಾಂಗರಾಗಿದ್ದರೂ ಈ ಇಳಿವಯಸ್ಸಿನಲ್ಲಿನಲ್ಲಿ ನಾಗರಾಜು ಅವರು ಯುವಕರನ್ನೂ ಮೀರಿಸುವಂತೆ ಚಟುವಟಿಕೆಯಿಂದ ಇದ್ದಾರೆ.