ಚಿತ್ರದುರ್ಗ: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜಡೆಗೊಂಡನಹಳ್ಳಿ ಸರ್ಕಾರಿ ಶಾಲೆ ಮಾತ್ರ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ. ಸುಂದರ ಪರಿಸರ, ಶಿಕ್ಷಣ ಹಾಗು ಶಾಲಾಭಿವೃದ್ಧಿಯಲ್ಲಿ ಖಾಸಗಿ ಶಾಲೆಗಳನ್ನೇ ಮೀರಿಸುವಂತಿದೆ. ಆ ಶಾಲೆಯೇ ಇಂದಿನ ನಮ್ಮ ಪಬ್ಲಿಕ್ ಹೀರೋ.
ಕರ್ನಾಟಕ ರಾಜ್ಯದ ಯಾವ ಸರ್ಕಾರಿ ಶಾಲೆಗಳಲ್ಲೂ ಇಲ್ಲದ ಈಜುಕೊಳವನ್ನು ಇಲ್ಲಿ ನಿರ್ಮಿಸಲಾಗಿದೆ. ಗ್ರಾಮಸ್ಥರ ನೆರವಿನೊಂದಿಗೆ, ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಸೇರಿ ಶಾಲಾ ಆವರಣವನ್ನೇ ಸೊಬಗಿನ ವನವಾಗಿಸಿದ್ದಾರೆ. ಈ ಶಾಲಾ ಆವರಣದಲ್ಲೊಂದು ಕೊಳವೆ ಬಾವಿ ಕೊರೆಸಿ, ವಾಣ ವಿಲಾಸ ಸಾಗರ ಮಾದರಿಯ ಪುಟ್ಟ ಆಣೆಕಟ್ಟನ್ನು ನಿರ್ಮಿಸಲಾಗಿದೆ.
ಸುಮಾರು ಎರಡು ಎಕರೆ ವಿಸ್ತೀರ್ಣವುಳ್ಳ ಶಾಲಾ ಆವರಣವನ್ನು ನಿರುಪಯುಕ್ತವಾಗಿ ಬಿಡದೇ ಹೂವು, ಹಣ್ಣು, ತರಕಾರಿ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಹೂವಿನ ಗಿಡಗಳು ಮತ್ತು ಹುಣಸೆ ಮರಗಳಿಂದ ಸುಮಾರು 2 ಲಕ್ಷದ 22 ಸಾವಿರ ಹಣ ಶಾಲೆಯ ಎಸ್.ಡಿ.ಎಂಸಿ ಖಾತೆಯಲ್ಲಿ ಉಳಿತಾಯವಾಗಿದೆ.
ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಸಂಖ್ಯೆ ಸಹ ಹೆಚ್ಚಾಗಿದೆ. ಅಲ್ಲದೇ ಈ ಶಾಲೆಗೆ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಮತ್ತು ಜಿಲ್ಲೆ ಹಾಗು ವಿಭಾಗಮಟ್ಟದ ಅತ್ಯುತ್ತಮ ಪರಿಸರ ಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Er6sy3k8aK4