ಕೊಪ್ಪಳ: ಸುಮಾರು ವರ್ಷಗಳ ಇತಿಹಾಸವನ್ನು ಹೇಳುವ ಐತಿಹಾಸಿಕ ಮಂಟಪಗಳು ಹಾಗೂ ಶಾಸನಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ನಾವು ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಮೌರ್ಯರ ಬೆಟ್ಟದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಭಾನುವಾರ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ವಿಕಾಸ್ ಕಿಶೋರ್ ಸುರಳ್ಕರ್ ಭಾಗವಹಿಸಿ ಐತಿಹಾಸಿಕ ಸ್ಥಳದ ಕುರಿತು ಮಾತನಾಡಿದರು. ಇದನ್ನೂ ಓದಿ: ಶಿರಾದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ
ಈ ವೇಳೆ ಅವರು, ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಇತಿಹಾಸವನ್ನು ಹೇಳುವ ಸಾಕಷ್ಟು ಕುರುಹುಗಳಿವೆ. ನವಶಿಲಾಯುಗ ಚಿತ್ರಗಳು, ವಿಜಯನಗರ ಕಾಲದ ಗುಹೆಗಳು, ದೇವಸ್ಥಾನಗಳು, ಶಾಸನಗಳನ್ನು ಕಾಣಬಹುದು. ಇಂತಹ ಮಹತ್ವ ಸ್ಥಳವನ್ನು ನಾವುಗಳು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.
ಯಾವುದೇ ಕಾರಣಕ್ಕೂ ಐತಿಹಾಸಿಕ ಸ್ಥಳಗಳಿಗೆ ಧಕ್ಕೆಯಾಗದಂತೆ ನಾವು ನೋಡಿಕೊಳ್ಳಬೇಕು. ನಾವು ಇವುಗಳನ್ನು ರಕ್ಷಣೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಇತಿಹಾಸವನ್ನು ತಿಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಇತಿಹಾಸದ ಕುರುಹುಗಳ ರಕ್ಷಣೆಗೆ ಮುಂದಾಗಬೇಕು. ಅದು ನಮ್ಮ ಕರ್ತವ್ಯ ಎಂದು ಹೇಳಿದರು. ಇದನ್ನೂ ಓದಿ: ಶಾಲಾ ಮಕ್ಕಳಿಗೆ 100 ಟ್ಯಾಬ್ ಮತ್ತು ಮಹಿಳೆಯರಿಗೆ 200 ಟೈಲರಿಂಗ್ ಯಂತ್ರ ವಿತರಣೆ
ಶಾಲಾ ವಿದ್ಯಾರ್ಥಿಗಳೊಂದಿಗೆ ಚಾರಣವನ್ನು ಹಮ್ಮಿಕೊಂಡು ಬೆಟ್ಟದ ಮೇಲಿರುವ ಪುರಾತನ ಮೌರ್ಯರ ಕಾಲದ ಕುರುಹುಗಳನ್ನು ವೀಕ್ಷಣೆ ಮಾಡಿದರು. ಇತಿಹಾಸಕಾರರಿಂದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದ್ದು, ಈ ವೇಳೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.