ಕಿಚ್ಚ ಸುದೀಪ್ ಅವರ ಅತ್ಯಾಪ್ತ, ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದ್ದು ನಿಜವಾದರೂ, ಅವರಿಗೆ ಯಾವುದೇ ಹೃದಯ ಸಂಬಂಧ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ. ಸದ್ಯ ಜಾಕ್ ಮಂಜು ಅವರು ಮನೆಯಲ್ಲೇ ಇರುವುದಾಗಿಯೂ ಅವರು ತಿಳಿಸಿದರು.
ಹದಿನೈದು ದಿನಗಳ ಹಿಂದೆ ಮೆಟ್ಟಿಲು ಹತ್ತುವಾಗ, ಜಾರಿ ಬಿದ್ದಿದ್ದಾರೆ. ಹಾಗಾಗಿ ಕಾಲಿಗೆ ಪೆಟ್ಟಾಗಿತ್ತು. ನೋವು ಕಡಿಮೆ ಆಗದೇ ಇರುವ ಕಾರಣಕ್ಕಾಗಿ ಆಸ್ಪತ್ರೆಗೆ ತೆರಳಿ ಅದಕ್ಕೆ ಬೇಕಾದ ಚಿಕಿತ್ಸೆ ಪಡೆದಿದ್ದಾರೆ. ಅದರ ಹೊರತಾಗಿ ಅವರಿಗೆ ಏನೂ ಆಗಿಲ್ಲ. ಸದ್ಯ ಮನೆಯಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆತಂಕ ಪಡುವಂಥದ್ದು ಏನೂ ಆಗಿಲ್ಲ ಎನ್ನುವುದು ನವೀನ್ ಗೌಡ ಅವರ ಮಾತು. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್
ಜಾಕ್ ಮಂಜು ಅವರು ಆಸ್ಪತ್ರೆ ಸೇರಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಸೂಕ್ತ ಮಾಹಿತಿ ಕೂಡ ದೊರೆಕಿರಲಿಲ್ಲ. ಅಲ್ಲದೇ, ಅರೆಬರೆಯ ಮಾಹಿತಿಗಳು ಹರಿದಾಡಿದ್ದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಆಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.