ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ಪ್ರಿಯಾಂಕ ಉಪೇಂದ್ರ ಅಭಿನಯದ “ಕರ್ತ ಕರ್ಮ ಕ್ರಿಯ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ಶ್ರೀವಿನಾಯಕ ದೇವಾಲಯದಲ್ಲಿ ನಡೆಯಿತು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.
ವೇದಾಂತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೇದಾಂತ್ ಗೌಡ ಹಾಗೂ ಶಿವ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಜಕಿರಣ್ ಜೆ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ನಟಿಸಿದ್ದ 1980 ಚಿತ್ರವನ್ನು ನಿರ್ದೇಶಿಸಿದ್ದ ರಾಜಕಿರಣ್ ಅವರಿಗೆ ಇದು ಎರಡನೇ ಚಿತ್ರ. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್
ಕ್ರೈಂಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಜುಲೈ ಮೊದಲವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಚಿತ್ರೀಕರಣ ನಡೆಯಲಿದೆ. “ಕರ್ತ ಕರ್ಮ ಕ್ರಿಯ” ವಿಭಿನ್ನ ಶೀರ್ಷಿಕೆ. ಇಲ್ಲಿ ಮಾಡಿದ ತಪ್ಪಿಗೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಎಂಬ ಮಾತಿಗೆ ಅನುಗುಣವಾಗಿ ಕಥೆ ಹೆಣೆಯಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜಕಿರಣ್.
ಜೀವ ಆಂಟೋನಿ ಛಾಯಾಗ್ರಹಣ, ಆನಂದರಾಜ್ ವಿಕ್ರಮ್ ಸಂಗೀತ ನಿರ್ದೇಶನ, ಲೋಕೇಶ್ ಪುಟ್ಟೇಗೌಡ ಸಂಕಲನ ಹಾಗೂ ಪುಷ್ಪರಾಜ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಎಸ್ ನರೇಂದ್ರಬಾಬು ಸಂಭಾಷಣೆ ಬರೆಯುತ್ತಿದ್ದಾರೆ.