ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಿನ್ನೆಲೆ ಇಂದು ಹೈಕೋರ್ಟ್ ನ್ಯಾಯಾಧೀಶರ ತಂಡ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರದಲ್ಲಿನ ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು, ಗೃಹ ಇಲಾಖೆ ADGP ಎಸ್.ಮುರುಗನ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರಾಜಾತಿಥ್ಯ ನೀಡಿ ಹಣ ಪಡೆಯುತ್ತಿರುವ ವೀಡಿಯೋ ʼಪಬ್ಲಿಕ್ ಟಿವಿʼಯಲ್ಲಿ ನಿರಂತರವಾಗಿ ವರದಿಯಾಗಿತ್ತು. ಈ ವಿಚಾರ ರಾಜ್ಯದಾದ್ಯಂತ ಜೈಲಿನ ಅಕ್ರಮದ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಸಂಪೂರ್ಣ ಮಾಹಿತಿ ಕಲೆಹಾಕಲು ಹೈಕೋರ್ಟ್ನ ನ್ಯಾಯಾಧೀಶರ ತಂಡ ಪರಪ್ಪನ ಅಗ್ರಹಾರ ಜೈಲಿಗೆ ಧಿಡೀರ್ ಭೇಟಿ ನೀಡಿದೆ. ಇದನ್ನೂ ಓದಿ: ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ
ನ್ಯಾಯಮೂರ್ತಿಗಳಾದ ವೀರಪ್ಪ ಮತ್ತು ದಿನೇಶ್ ಕುಮಾರ್ ನೇತೃತ್ವದ ತಂಡ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, 3 ಗಂಟೆಗೂ ಹೆಚ್ಚು ಕಾಲ ಜೈಲಿನ ಪುರುಷ ಹಾಗೂ ಮಹಿಳಾ ಕೈದಿಗಳ ಬ್ಯಾರಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದಿಕೊಂಡಿದೆ. ಜೈಲು ಭೇಟಿ ಮುಗಿಸಿ ಹೊರಡುವಾಗ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ವೀರಪ್ಪ, ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದು, ಯಾವುದೇ ಅಕ್ರಮಗಳು ಕಂಡು ಬಂದಿಲ್ಲ. ಜೈಲಿಗೆ ಭೇಟಿ ನೀಡುತ್ತಿರುವ ವಿಷಯ ಮೊದಲೇ ತಿಳಿದಿರುವ ಸಾಧ್ಯತೆ ಇದ್ದು, ಜೈಲಿನಲ್ಲಿ ವ್ಯವಸ್ಥೆಯಲ್ಲಿ ಲೋಪಗಳು ಕಾಣಲಿಲ್ಲ. ಪುರುಷ ಮತ್ತು ಮಹಿಳಾ ಕೈದಿಗಳ ಬ್ಯಾರಕ್ ಹಾಗೂ ಅಡುಗೆ ಮನೆಗೆ ಸಹ ಭೇಟಿ ನೀಡಿ ಆಹಾರ ರುಚಿ-ಶುಚಿ, ಆಹಾರದ ಗುಣಮಟ್ಟವನ್ನೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಜೈಲಿನ ಅಕ್ರಮದ ಬಗ್ಗೆ ಈಗಲೇ ಕ್ಲೀನ್ ಚಿಟ್ ನೀಡಲು ಸಾಧ್ಯವಿಲ್ಲ. ಮತ್ತೆ ಹಲವು ಬಾರಿ ಇದೇ ರೀತಿ ಜೈಲಿಗೆ ಅನಿರೀಕ್ಷಿತ ಭೇಟಿ ನೀಡಿ ಜೈಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮದ ಬಗ್ಗೆ ಮಾಹಿತಿ ಸಿಕ್ಕರೆ ಕಾನೂನು ಪ್ರಾಧಿಕಾರದಿಂದ ಕ್ರಮ ಕೈಗೊಳ್ಳಲಾಗುವುದು. 9 ರಿಂದ 10 ವರ್ಷ ಜೈಲು ವಾಸ ಅನುಭವಿಸಿದರ ಪಟ್ಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ರೇಡ್ ಆಗಿದೆ: ಆರಗ ಜ್ಞಾನೇಂದ್ರ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ ಎನ್ನುವುದಕ್ಕೆ ಸಂಬಂಧಿಸಿದ ಜೆಸಿಪಿ ನಾರಾಯಣ ಸೆರೆಯಾಗಿದ್ದ ಕೆಲ ವೀಡಿಯೋ ದೃಶ್ಯಗಳು ʻಪಬ್ಲಿಕ್ ಟಿವಿʼಯಲ್ಲಿ ನಿರಂತರ ವರದಿಯಾಗಿತ್ತು. ಹೊರ ಜಗತ್ತಿನಲ್ಲಿ ಅಪರಾಧ ಕೃತ್ಯಗಳನ್ನು ಮಾಡುವವರು ಬುದ್ದಿ ಕಲಿತು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಲಿ ಎನ್ನುವ ನಿಟ್ಟಿನಲ್ಲಿ, ಮಾಡಿದ ತಪ್ಪಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇಲ್ಲಿಗೆ ಬರುವ ಕೈದಿಗಳು ತಮ್ಮ ಹಣ ಪ್ರಭಾವ ಬಳಸಿ ಅಧಿಕಾರಿಗಳ ನೆರವಿನಿಂದ ಐಷಾರಾಮಿ ವ್ಯವಸ್ಥೆ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡವನ್ನು ರಚಿಸಿದೆ.