ಬೆಳಗಾವಿ: ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡ ನಾದ ಮೊಳಗುತ್ತದೆ. ಮಾತ್ರವಲ್ಲದೇ ಎಲ್ಲೆಲ್ಲೂ ಕನ್ನಡಮಯವಾಗಿ ಗೋಚರಿಸುತ್ತದೆ. ಆದರೆ ಗಡಿನಾಡು ಬೆಳಗಾವಿಯಲ್ಲಿ ಕರಾಳ ದಿನದ ಭೀತಿಯಲ್ಲೇ ಕನ್ನಡ ಹಬ್ಬದ ಸಡಗರ ಮನೆ ಮಾಡಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ದೊಡ್ಡ ದೊಡ್ಡ ದ್ವಾರ ಬಾಗಿಲು, ಎಲ್ಲೆಲ್ಲು ಕನ್ನಡ ಬಾವುಟಗಳು ಕಾಣಿಸುತ್ತಿವೆ. ಬೆಳಗ್ಗೆ ಸಿಪಿಎಡ್ ಮೈದಾನದಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿವೆ.
ಸಾಮಾಜಿಕ ಜಾಲತಾಣದಲ್ಲಿ ‘ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದೈತಿ’ ಎನ್ನುವ ಘೋಷ ವಾಕ್ಯ ಹೊಂದಿರೋ ಟೀ ಶರ್ಟ್ ಗಳ ಮಾರಾಟ ಜೋರಾಗಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜನ ಈ ಟಿ ಶರ್ಟ್ ಖರೀದಿ ಮಾಡಿದ್ದಾರೆ. ಅಲ್ಲದೇ ಬೆಳಗಾವಿಯ ಬಗ್ಗೆ ಹಾಡೊಂದನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಸಾವಿರಾರು ಜನ ಈ ವಿಡಿಯೋ ನೋಡಿದ್ದಾರೆ.
ಎಂಇಎಸ್ ಸಂಘಟನೆ ಕರಾಳ ದಿನ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಕರಾಳ ದಿನಕ್ಕೆ ನಗರ ಪೊಲೀಸ್ ಆಯುಕ್ತರಿಂದ ಯಾವುದೇ ರೀತಿಯ ಅನುಮತಿ ಸಿಕ್ಕಿಲ್ಲ. ಬೆಳಗಾವಿಯಲ್ಲಿ ಲಕ್ಷಾಂತರ ಜನ ಸೇರುವ ಹಿನ್ನೆಲೆ ನಗರ ಪೆÇಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ನೇತೃತ್ವದಲ್ಲಿ 1,500 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಒಟ್ಟಾರೆಯಾಗಿ ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ ಕನ್ನಡಿಗರ ಸಂಭ್ರಮದ ವೇಳೆಯಲ್ಲಿ ವಿಘ್ನ ಸಂತೋಷಿಗಳು ಕರಾಳ ದಿನ ಆಚರಣೆ ಮಾಡೋದು ಖಂಡನೀಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv