ಮೈಸೂರು: ನಾನು ಪ್ರಕಾಶ್ ರಾಜ್ ಅಭಿಮಾನಿಯಾಗಿದ್ದು, ಎಲ್ಲರಿಗೂ ಸೋಲಿನ ನೋವು ಇರುತ್ತದೆ. ಪ್ರಕಾಶ್ ರಾಜ್ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನಡೆ ಇರಬಹುದು ಎಂದು ಸಂಸದ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪ್ರಕಾಶ್ ರಾಜ್ ಕುರಿತು ಪ್ರೀತಿಯ ಮಾತುಗಳನ್ನಾಡಿದ ಸಂಸದ ಪ್ರತಾಪ್ ಸಿಂಹ, ನಟನೆಯ ವಿಚಾರದಲ್ಲಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಟನೆಗೆ ನಾನು ಅಭಿಮಾನಿಯಾಗಿದ್ದೇನೆ. ಆದರೆ ಅವರ ಸೈದ್ಧಾಂತಿಕ ವಿಚಾರಕ್ಕೆ ನಮ್ಮ ವಿರೋಧವಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಗ್ಗೆ ಸಭ್ಯತೆ ಮೀರಿ ಮಾತನಾಡಿದ್ದರು. ಆಗ ನಾನು ಕಟುವಾಗಿ ಟೀಕಿಸಿದ್ದೆ. ಇದನ್ನು ಹೊರತು ಪಡಿಸಿದರೆ ನಮ್ಮ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಆ ಅಭಿಮಾನ ನನಗಿದೆ ಎಂದರು.
ಎಲ್ಲರೂ ಚುನಾವಣೆಗೆ ಗೆಲ್ಲಬೇಕು ಎಂಬ ಆಸೆಯಿಂದ ನಿಲ್ಲುತ್ತಾರೆ. ಪ್ರಕಾಶ್ ರಾಜ್ ಈಗ ಅವರು ಚುನಾವಣೆ ನಿಂತು ಸೋತಿದ್ದಾರೆ. ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ. ಪ್ರಕಾಶ್ ರಾಜ್ ಅವರಿಗೆ ರಾಜಕೀಯ ಜೀವನಕ್ಕೆ ಹಿನ್ನಡೆ ಆಗಿರಬಹುದು. ಹೀಗಾಗಿ ಈ ಸಂದರ್ಭದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದರು.
ಸಿಂಹ ವಿರುದ್ಧ 1 ರೂ. ಕೇಸ್:
2017ರ ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್ಲೈನ್ ಈ ಸುದ್ದಿಯಲ್ಲಿತ್ತು. ಈ ಟ್ವೀಟ್ ಬಳಿಕ ನವೆಂಬರ್ 23 ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರೈ 10 ದಿನದ ಒಳಗೆ ದೂರಿಗೆ ಉತ್ತರ ಕೊಡಬೇಕು ಪ್ರಕಾಶ್ ರೈ ಲಿಗಲ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ನಿಮ್ಮ ನೋಟಿಸ್ ಲಿಗಲ್ ಆಗಿ ಇಲ್ಲ ಅದಕ್ಕೆ ಉತ್ತರಿಸಲ್ಲ ಎಂದು ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದರು. ಈ ಪ್ರಕರಣದ ವಿಚಾರಣೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ನಡೆಯುತ್ತಿದೆ.