ಚಿಕ್ಕಬಳ್ಳಾಪುರ: ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ ಜಾನುವಾರುಗಳ ರಕ್ಷಣೆ ವೇಳೆ ಪೊಲೀಸರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಲು ಯತ್ನಿಸಿ, ಅಡ್ಡಿಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ನಡೆದಿದೆ.
ಗೋವ್ ಗ್ವಾನ್ ಫೌಂಡೇಶನ್ ದೂರಿನ ಮೇರೆಗೆ ಮಂಚೇನಹಳ್ಳಿ ಪಿಎಸ್ಐ ಹಾಗೂ ಕೆಲ ಸಿಬ್ಬಂದಿ ಅಕ್ರಮವಾಗಿ ಕೂಡಿ ಹಾಕಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದರು. ಆದರೆ ಅಲ್ಲಿನ ಕೆಲ ಬುರ್ಕಾಧಾರಿ ಮಹಿಳೆಯರು ಅವರನ್ನು ಅಡ್ಡಿಪಡಿಸಿ, ಕಲ್ಲು ತೂರಾಟ ನಡೆಸಲು ಯತ್ನಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮಜಯಂತಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ
ವಿಷಯ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಹೆಚ್ಚುವರಿ ಪೊಲೀಸರನ್ನು ಕಳುಹಿಸಿ, ಜಾನುವಾರುಗಳ ರಕ್ಷಣೆ ಮಾಡಿದರು. 30 ಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮವಾಗಿ ಒಂದೇ ಕಡೆ ಓಪನ್ ಶೆಡ್ನಲ್ಲಿ ಕೂಡಿ ಹಾಕಲಾಗಿದ್ದು, ಕ್ಯಾಂಟರ್ಗಳ ಮೂಲಕ ಜಾನುವಾರುಗಳನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ಇದನ್ನೂ ಓದಿ: ಗ್ರಾ. ಪಂ ಅಧ್ಯಕ್ಷೆ ಗಾದಿಗಾಗಿ ದೇವರ ಮೊರೆ – ಹರಕೆ ತೀರಿಸಲು ಹೆಲಿಕಾಪ್ಟರ್ ತಂದು ಪುಷ್ಪಾರ್ಚನೆ
ಘಟನೆ ವೇಳೆ ನೂರಾರು ಜನ ಸ್ಥಳದಲ್ಲಿ ಜಮಾಯಿಸಿ, ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದರು. ಆದರೂ ಹರಸಾಹಸ ಪಟ್ಟ ಪೊಲೀಸರು ಸ್ಥಳೀಯ ಮುಖಂಡರಿಗೆ ಕಾನೂನು ಅರಿವು ಮೂಡಿಸಿ, ಜಾನುವಾರುಗಳ ರಕ್ಷಣೆ ಮಾಡಿದರು. ಈ ವೇಳೆ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆತಂಕದ ನಡುವೆ ಪೊಲೀಸರು ಜಾನುವಾರುಗಳನ್ನು ರಕ್ಷಿಸಿ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.