ತುಮಕೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment Case) ನೀಡಿದ ಆರೋಪದ ಮೇಲೆ ಕುಣಿಗಲ್ (Kunigal) ತಾಲೂಕಿನ ಹಂಗರನಹಳ್ಳಿ ವಿದ್ಯಾಚೌಡೇಶ್ವರಿ ದೇವಸ್ಥಾನದ (Vidya Chowdeshwari) ಬಾಲ ಮಂಜುನಾಥ ಸ್ವಾಮೀಜಿಯನ್ನು (Bala manjunatha Swamiji) ಬಂಧಿಸಲಾಗಿದೆ.
ಗುಪ್ತಾಂಗ ವ್ಯಾಧಿ ವೇಳೆ ವೈದ್ಯರಿಗೆ ತೋರಿಸಿದ ವೀಡಿಯೋ ಇಟ್ಟುಕೊಂಡು ಮಠದ ಮಾಜಿ ಆಪ್ತ ಸಹಾಯಕ ಅಭಿಷೇಕ್ ಹಾಗೂ ಸಹಚರರು ನನ್ನನ್ನು ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಸ್ವಾಮಿಜಿ ತಮ್ಮ ಹಾಲಿ ಆಪ್ತ ಸಹಾಯಕ ಅಭಿಲಾಷ್ ಮೂಲಕ ಸೆನ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರೇ ಬಾಲ ಮಂಜುನಾಥ ಸ್ವಾಮಿಜಿಗೆ ರಿವರ್ಸ್ ಆಗಿದೆ. ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ.
ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ (Huliyurdurga Police Station) ಪೋಕ್ಸೋ ಕೇಸ್ (Pocso Case) ದಾಖಲು ಮಾಡಲಾಗಿದೆ. ತುಮಕೂರು (Tumakuru) ಎಸ್ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಇಬ್ಬರನ್ನು ಈಗ ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಕರ್ನಾಟಕ ಸೇರಿ 6 ರಾಜ್ಯಗಳ ಕೈ ಅಭ್ಯರ್ಥಿಗಳ ಪಟ್ಟಿ ಫೈನಲ್ – ಈ ಬಾರಿಯೂ ವಯನಾಡಿನಿಂದ ರಾಹುಲ್ ಸ್ಪರ್ಧೆ?
ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಆರೋಪ ಬಂದಿದೆ. ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರು ಅನ್ಯ ಉದ್ದೇಶಕ್ಕೆ ಬಳಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ 5,000 ರೂ. ದಂಡ
ಏನಿದು ಪ್ರಕರಣ?
ಬಾಲ ಮಂಜುನಾಥ ಸ್ವಾಮೀಜಿ ಅಭಿಷೇಕ್ ಜೊತೆ ತಮಗೆ ಚರ್ಮ ರೋಗದ ಸಮಸ್ಯೆ ಕುರಿತಂತೆ ಹೇಳಿಕೊಂಡಿದ್ದರು. ಅಭಿಷೇಕ್ ಮಹಿಳೆಯನ್ನು ಪರಿಚಯಿಸಿ ವೈದ್ಯ ಎಂದು ಹೇಳಿದ್ದ. ಮಹಿಳೆಗೆ ಚರ್ಮ ರೋಗ ತೋರಿಸಲು ಸ್ವಾಮೀಜಿಗೆ ಇಷ್ಟವಿಲ್ಲದ ಕಾರಣ ಅವರ ಮೊಬೈಲಿಗೆ ಫೋಟೋ ಕಳುಹಿಸಿದ್ದರು. ವ್ಯಾಧಿಯ ಬಗ್ಗೆ ವೈದ್ಯರ ಬಳಿ ಹೇಳಿಕೊಳ್ಳಲು ಸ್ವಾಮೀಜಿಗೆ ವೀಡಿಯೋ ಕಾಲ್ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಗ ಸ್ವಾಮೀಜಿಯವರು ಚರ್ಮ ವ್ಯಾಧಿಯಿರುವ ಜಾಗವನ್ನು ತೋರಿಸಿದ್ದರು. ಅದೇ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅಭಿಷೇಕ್ ಹಾಗೂ ಮತ್ತಿತರರು ಸ್ವಾಮೀಜಿಯವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಮಠದ ದೇವಸ್ಥಾನದ ಟ್ರಸ್ಟಿ ಕೆ. ಅಭಿಲಾಷ್ ಎಂಬುವರು ಫೆಬ್ರವರಿ 10 ರಂದು ದೂರು ದಾಖಲಿಸಿದ್ದರು.
ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಎಚ್.ಎಸ್. ಅಭಿಷೇಕ್, ಬೆಂಗಳೂರಿನಲ್ಲಿರುವ ಯುವತಿ, ಪಾಂಡವಪುರ ಬಳಿಯ ವಿಜಯಕಾಳಿ ದೇವಸ್ಥಾನದ ರಾಜೇಶ್, ಶ್ರೀನಿವಾಸ್, ರಾಮನಗರ ಜಿಲ್ಲೆಯ ಕವನಪುರ ಗ್ರಾಮದ ಚೇತನ್, ಕುಣಿಗಲ್ ನ ನಂದೀಶ್ ಎಂಬುವರ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಅಭಿಷೇಕ್ ಕರೆಯಿಸಿ ವಿಚಾರಣೆ ನಡೆಸಿದಾಗ ಆತ ಸ್ವಾಮೀಜಿಯವರು ಹಲವು ದಿನಗಳ ಹಿಂದೆ ಮಠದಲ್ಲಿ ಅಪ್ರಾಪ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದಾಗಿ ಆರೋಪಿಸಿದ್ದ. ಈ ವಿಚಾರ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಪೊಲೀಸರು ಕಳೆದ ರಾತ್ರಿ ಮಠದಲ್ಲಿ ಪರಿಶೀಲನೆ ನಡೆಸಿದಾಗ ಸಿಕ್ಕಿದ ಕೆಲವು ದಾಖಲೆಗಳನ್ನು ಆಧರಿಸಿ ಸ್ವಾಮೀಜಿಯವರನ್ನು ಬಂಧಿಸಿದ್ದಾರೆ.