ಬೆಂಗಳೂರು: ಹೈದರಾಬಾದ್ ನಿಂದ ಆಗಮಿಸಿದ ಕಾಂಗ್ರೆಸ್ ಶಾಸಕರು ಇಂದಿರಾನಗರದ 100 ಫೀಟ್ ಎಂಬೆಸಿ ಗಾಲ್ಫ್ ಬುಸಿನೆಸ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬಸ್ ರೆಸಾರ್ಟ್ ಗೆ ತೆರಳಲಿದೆ ಎಂದು ಆರಂಭದಲ್ಲಿ ಮಾಹಿತಿ ಸಿಕ್ಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ಲಾನ್ ಬದಲಾಗಿದ್ದು ಜಾರ್ಜ್ ಅವರು ರೆಸಾರ್ಟ್ ಬೇಡ ನಮ್ಮ ಹೋಟೆಲ್ ಗೆ ಬನ್ನಿ ಎಂದು ಡಿ.ಕೆ ಶಿವಕುಮಾರ್ ಮತ್ತು ಬೈರತಿ ಬಸವರಾಜ್ ಸಹೋದರರಿಗೆ ಸೂಚನೆ ನೀಡಿದ್ದರು.
ಈ ಸೂಚನೆಯ ಹಿನ್ನೆಲೆಯಲ್ಲಿ ಶಾಸಕರ ಬಸ್ ಈಗ ಜಾರ್ಜ್ ಒಡೆತನದ ಎಂಬೆಸಿ ಗಾಲ್ಫ್ ಹೋಟೆಲ್ಗೆ ಆಗಮಿಸಿದ್ದು, ಹೋಟೆಲ್ ನಲ್ಲಿ ಶಾಸಕರು ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರು ಈ ಹೋಟೆಲ್ಗೆ ಭೇಟಿ ನೀಡಲಿದ್ದು, ಬಳಿಕ ನೇರವಾಗಿ ಇಲ್ಲಿಂದಲೇ ವಿಧಾನ ಸೌಧಕ್ಕೆ ಶಾಸಕರು ತೆರಳಲಿದ್ದಾರೆ.
ಹೈದರಾಬಾದ್ಗೆ ತೆರಳುವ ಮುನ್ನ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದರು. ಹೀಗಾಗಿ ಇಲ್ಲಿಗೆ ಆಗಮಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬಿಡದಿಯಿಂದ ವಿಧಾನಸೌಧಕ್ಕೆ 40 ಕಿ.ಮೀ ದೂರ ಇರುವ ಕಾರಣ ಎಂಬೆಸಿ ಗಾಲ್ಫ್ ಗೆ ತೆರಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.