ಲಕ್ನೋ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರನ್ನು ಗ್ರಾಮಸ್ಥರು ದೊಣ್ಣೆಯಿಂದ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಪಿಲಿಭಿತ್ನಲ್ಲಿ ಗ್ರಾಮಸ್ಥರ ನಡುವೆ ಚರಂಡಿ ವಿಚಾರದಲ್ಲಿ ಜಗಳವಾಗುತ್ತಿತ್ತು. ಪರಿಣಾಮ ಗ್ರಾಮದ ಕೆಲವರು ಈ ವಿಚಾರವನ್ನು ಬಗೆಹರಿಸಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಕ್ಕೆ ಪೊಲೀಸರು ಗ್ರಾಮಕ್ಕೆ ಬಂದಿದ್ದು, ಜನರು ಅವರ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಗ್ರಾಮದ ಜನರೆ ಪೊಲೀಸರಿಗೆ ದೊಣ್ಣೆಯಿಂದ ಹೊಡೆಯಲು ಹೋಗಿದ್ದು, ಕಾನ್ಸ್ಟೆಬಲ್ ಒಬ್ಬರಿಗೆ ಮುರಿದಿದೆ. ಅಲ್ಲದೆ ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!
ಏನಿದು?
ಇಕ್ಬಾಲ್ ಮತ್ತು ಆತನ ಸಹೋದರ ಮೌಸಂ ಅವರ ಮನೆಯ ಚರಂಡಿ ನೀರು ಸಾಲಿಗ್ರಾಮ ಮತ್ತು ಗ್ರಾಮದ ರಾಮಸ್ವರೂಪ ಅವರ ಹೊಲಗಳಿಗೆ ಹೋಗುತ್ತಿತ್ತು. ಪರಿಣಾಮ ಇದನ್ನು ಸಾಲಿಗ್ರಾಮ ವಿರೋಧಿಸಿದ್ದು, ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನೆಲೆ ಇಕ್ಬಾಲ್ ಪೊಲೀಸರಿಗೆ ಕರೆ ಮಾಡಿದ್ದು, ವಿಷಯವನ್ನು ತಿಳಿಸಿದ್ದಾರೆ. ಅದಕ್ಕೆ ಘಟನಾ ಸ್ಥಳಕ್ಕೆ ಜಾರಾ ಪೊಲೀಸ್ ಔಟ್ಪೋಸ್ಟ್ ಇನ್ಚಾರ್ಜ್ ಜಿತೇಂದ್ರ ಸಿಂಗ್, ಕಾನ್ಸ್ಟೆಬಲ್ ಮೋಹಿತ್ ಪಾಲ್ ಮತ್ತು ಹೆಡ್ ಕಾನ್ಸ್ಟೆಬಲ್ ಅನಿಲ್ ಬಂಗಂಜ್ ಹೋಗಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ ಎರಡು ಕಡೆಗಳಲ್ಲಿ ಅನೇಕ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸರು ಅಲ್ಲಿದ್ದವರನ್ನು ಸ್ಥಳದಿಂದ ಹೋಗಲು ತಿಳಿಸಿದರು. ಆದರೆ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನು ದೊಣ್ಣೆಗಳಿಂದ ಹೊಡೆದು ಅಲ್ಲಿಂದ ಓಡಿಸಲು ಯತ್ನಿಸಿದರು. ಹೇಗೋ ಪೊಲೀಸ್ ಸಿಬ್ಬಂದಿ ಹೊಲಗಳಿಂದ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಈ ವೇಳೆ ಪೊಲೀಸರಿಗೆ ಗಾಯಗಳಾಗಿದ್ದು, ಕಾನ್ಸ್ಟೇಬಲ್ ಮೋಹಿತ್ನ ಮೂಗು ಮುರಿದಿದೆ.
ಹಲ್ಲೆ ವಿರುದ್ಧ ಪ್ರಕರಣ ದಾಖಲು!
ಪೊಲೀಸರ ವಿರುದ್ಧವೇ ಹಲ್ಲೆ ಮಾಡಿದ ಮಾಹಿತಿ ಪಡೆದ ಗಜರೌಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, 9 ಮಂದಿಯನ್ನು ಬಂಧಿಸಿದ್ದಾರೆ. ನಂತರ ಜರಾ ಪೊಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿದ ಪರಿಣಾಮ ಮಹಿಳೆ ಸೇರಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪ್ರಕಾರ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಫಿಟ್ನೆಸ್ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್
ಪ್ರಸ್ತುತ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಿಲಿಭಿತ್ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಪಿ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.