ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ತಿವಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.
ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದ ನಿವಾಸಿಯಾದ 45 ವರ್ಷದ ರೇವಣಗೌಡ ಪಾಟೀಲ ಮೃತ ವ್ಯಕ್ತಿ. ಸವಣೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಎಪಿಎಂಸಿ ಆವರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಪಟ್ಟಣದ ವೀರಭದ್ರೇಶ್ವರ ಭಕ್ತ ಮಂಡಳಿ ಈ ಹೋರಿ ಸ್ಪಧೆಯನ್ನು ಏರ್ಪಡಿಸಿತ್ತು. ರೇವಣಗೌಡ ಅವರು ಸವಣೂರು ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಆಗಮಿಸಿದ್ದರು.
ಸ್ಪರ್ಧೆಯನ್ನು ನೋಡುವಾಗ ಹೋರಿಯೊಂದು ನೇರವಾಗಿ ರೇವಣಗೌಡರ ಹೊಟ್ಟೆಗೆ ತಿವಿದಿದೆ. ತೀವ್ರವಾಗಿ ಗಾಯಗೊಂಡ ರೇವಣಗೌಡರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ರೇವಣಗೌಡರು ಸಾವನ್ನಪ್ಪಿದ್ದಾರೆ.
ಕಾರ್ಯಕ್ರಮ ಆಯೋಜಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಆರೋಪದ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.