ಕೋಲಾರ: ಒಂದು ರೂಪಾಯಿ ಬಂಡವಾಳ ಇಲ್ಲದೇ ಎಸೆದ ಮಾವಿನಕಾಯಿಗಳಿಂದ ಕೋಲಾರದ ಬಡವರು ಹಾಗೂ ಅಲೆಮಾರಿಗಳು ವರ್ಷಪೂರ್ತಿ ಜನರಿಗೆ ಮಾವಿನ ಸ್ವಾದ ನೀಡುತ್ತಾರೆ.
ಕೋಲಾರದ ಮಾವಿನ ಕಣಜ ಎಂದೆ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದ ಭಾಗದಲ್ಲಿ ಎಲ್ಲೆಡೆ ಮಾವು ತುಂಬಿ ತುಳುಕುತ್ತಿರುತ್ತವೆ. ಮಾರುಕಟ್ಟೆಯಲ್ಲಿ ಯೋಗ್ಯವಲ್ಲದ ಮಾವಿನ ಕಾಯಿಗಳನ್ನು ಅಲ್ಲಲ್ಲಿ ಎಸೆದಿರುತ್ತಾರೆ. ಸುತ್ತಮುತ್ತಲ ಬಡವರು, ಅಲೆಮಾರಿಗಳು ಅದನ್ನೇ ಆರಿಸಿ ಬಂಡವಾಳ ಮಾಡಿಕೊಂಡು, ಉಪ್ಪಿನ ಕಾಯಿ ಹಾಗೂ ಆಮ್ಚೂರ್ನಂತಹ ಬಾಯಲ್ಲಿ ನೀರೂರಿಸುವ ಉತ್ಪನ್ನಗಳನ್ನು ತಯಾರಿಸ್ತಾರೆ.
ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಇದನ್ನು ಒಳ್ಳೆಯ ಬೆಲೆಗೆ ವರ್ಷಪೂರ್ತಿ ಮಾರಾಟ ಮಾಡ್ತಾರೆ. ಇತ್ತೀಚೆಗೆ ಬಿದ್ದ ಗಾಳಿ ಮಳೆಗೆ ಫಸಲಿಗೆ ಬಂದ ಮಾವು ನೆಲಕಚ್ಚಿ, ರೈತರ ನಿರೀಕ್ಷೆ ಹುಸಿಯಾಗಿದೆ. ಆದರೆ ಮಾರುಕಟ್ಟೆ ಆಸುಪಾಸಿನಲ್ಲಿರುವ ಗುಡಿಸಲು ವಾಸಿಗಳಿಗೆ ಮಾತ್ರ ಮಾವು ವರದಾನವಾಗಿದೆ.
ಮಾವಿನ ಉತ್ಪನ್ನಗಳನ್ನು ತಯಾರಿಸಿ ಕೆಜಿಗೆ 25ರಿಂದ 30 ರೂಪಾಯಿಗೆ ಮಾರುತ್ತಿದ್ದಾರೆ. ಮಾವನ್ನೇ ಮುಖ್ಯ ಬೆಳೆಯಾಗಿಸಿಕೊಂಡಿರುವ ಈ ಭಾಗದ ರೈತರಿಗೆ ಲಾಭ ಇಲ್ಲವಾದ್ರೂ, ನಾಶವಾದ ಮಾವಿನಿಂದ ಅದೆಷ್ಟೋ ಬಡವರ ಜೀವನ ಹಸನಾಗುತ್ತಿದೆ.