ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ಪ್ರಮುಖ ಆರೋಪಿ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಆಪ್ತೆ ಅರ್ಪಿತಾ ಮುಖರ್ಜಿಗೆ ವಿಶೇಷ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಡಿ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿಯನ್ನು ಬಂಧಿಸಿ ತನಿಖೆ ನಡೆಸಿತ್ತು. ಆ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೋನ್ ಕುಮಾರ್ ಸಾಧು ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ನ್ಯಾಯಾಧೀಶರು ಪ್ರಕರಣದ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಲಿಸಿದ ನಂತರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ
ಸರ್ಕಾರಿ ಶಿಕ್ಷಕರ ನೇಮಕಾತಿ ಹಗರಣ ಮತ್ತು ಅಕ್ರಮ ಹಣ ಆರೋಪದಡಿ ಇಡಿ ಜುಲೈ 23 ರಂದು ಪಾರ್ಥ ಚಟರ್ಜಿಯನ್ನು ಬಂಧಿಸಿತ್ತು. ಬಳಿಕ ಪಾರ್ಥ ಚಟರ್ಜಿ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರ ಮನೆಯಲ್ಲಿ ತನಿಖೆ ನಡೆಸಿತ್ತು. ಚಟರ್ಜಿ ಆಪ್ತೆ ಅರ್ಪಿತಾ ಮನೆಯಲ್ಲೂ ಇಡಿ ತನಿಖೆ ನಡೆಸಿ, ಸುಮಾರು 21 ಕೋಟಿ ರೂ. ಮೊತ್ತದ ಹಣವನ್ನು ಬಯಲಿಗೆ ತಂದಿತ್ತು. ಆ ಬಳಿಕ ಎರಡನೇ ಬಾರಿ ಇಡಿ ದಾಳಿ ನಡೆಸಿ ಬೆಲ್ಘಾರಿಯಾ ಟೌನ್ ಕ್ಲಬ್ನಲ್ಲಿರುವ ಫ್ಲಾಟ್ನಲ್ಲಿ 50 ಕೋಟಿ ರೂ.ಗೂ ಹೆಚ್ಚು ಮತ್ತು 5 ಕೆ.ಜಿಗೂ ಅಧಿಕ ಚಿನ್ನವನ್ನು ವಶಪಡಿಕೊಂಡಿತ್ತು. ನಂತರ ಅರ್ಪಿತಾ ಚಟರ್ಜಿಯನ್ನು ಇಡಿ ಬಂಧಿಸಿತ್ತು. ಇದನ್ನೂ ಓದಿ: ಅಧಿವೇಶನ ಇಲ್ಲದಿದ್ದಾಗಲೂ ರಾಹುಲ್, ಸೋನಿಯಾ ಇಡಿ ತನಿಖೆಗೆ ಸಹಕರಿಸಿಲ್ಲ: ಖರ್ಗೆಗೆ ಪ್ರಹ್ಲಾದ್ ಜೋಶಿ ತಿರುಗೇಟು